ಹೈದರಾಬಾದ್ : ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ 86 ವರ್ಷದ ಕೈಗಾರಿಕೋದ್ಯಮಿಯೊಬ್ಬರನ್ನು ಅವರ ಮೊಮ್ಮಗನೇ ನಿವಾಸದಲ್ಲಿ ಕೊಲೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಶನಿವಾರ ರಾತ್ರಿ ಬಂಧಿಸಲಾಗಿದೆ ಎಂದು ಪಂಜಗುಟ್ಟ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ನಗರದ ವೆಲ್ಜಾನ್ ಗ್ರೂಪ್ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ವಿ.ಸಿ. ಜನಾರ್ದನ್ ರಾವ್ ಮೃತ ವ್ಯಕ್ತಿ. ಅವರ ಮೊಮ್ಮಗ ಕೆ. ಕೀರ್ತಿ ತೇಜಾ (28) ಕೊಲೆ ಆರೋಪಿ. ತನ್ನ ಅಜ್ಜನ ಮೇಲೆ ಮೊಮ್ಮಗ ಹಲವು ಬಾರಿ ಚಾಕುವಿನಿಂದ ಇರಿದಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತ ವ್ಯಕ್ತಿಯ ದೇಹದ ಮೇಲೆ ಹಲವು ಇರಿದ ಗಾಯಗಳಿದ್ದವು. ಘಟನೆ ವೇಳೆ ಅಡ್ಡಬಂದ ತಾಯಿಗೂ ಆರೋಪಿ ಚಾಕುವಿನಿಂದ ಇರಿದಿದ್ದು, ಅವರಿಗೂ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದರು.
![ತಾತನಿಗೆ ಇರಿದು ಕೊಂದ ಮೊಮ್ಮಗ, Grandson kills Man](https://etvbharatimages.akamaized.net/etvbharat/prod-images/09-02-2025/23508337_news.jpg)
ನಗರದ ಇನ್ನೊಂದು ಪ್ರದೇಶದಲ್ಲಿ ವಾಸವಾಗಿರುವ ತೇಜ ಹಾಗೂ ಆತನ ತಾಯಿ ಗುರುವಾರ ಸೋಮಾಜಿಗುಡದಲ್ಲಿರುವ ರಾವ್ ಅವರ ಮನೆಗೆ ಭೇಟಿ ನೀಡಿದ್ದರು. ತಾಯಿ ಕಾಫಿ ಮಾಡಲು ಹೋದಾಗ ತೇಜಾ ಹಾಗೂ ರಾವ್ ನಡುವೆ ಆಸ್ತಿ ಹಂಚಿಕೆ ವಿಚಾರವಾಗಿ ಜಗಳ ನಡೆದಿದೆ. ಬಾಲ್ಯದಿಂದಲೂ ತನ್ನ ಮೇಲೆ ಅಜ್ಜನ ಅಸಡ್ಡೆ ಹಾಗೂ ತನಗೆ ಆಸ್ತಿ ಹಂಚಲು ನಿರಾಕರಿಸುತ್ತಿರುವ ಬಗ್ಗೆ ಆರೋಪಿಸಿ ಚಾಕು ತೆಗೆದು ಅಜ್ಜನ ಮೇಲೆ ಆಕ್ರಮಣ ಮಾಡಿದ್ದಾನೆ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ತಿಳಿಸಿದರು.
ಪ್ರಾಥಮಿಕ ತನಿಖೆಯಲ್ಲಿ ಮೃತ ವ್ಯಕ್ತಿಗೆ 73 ಬಾರಿ ಇರಿದು ಕೊಲೆಗೈಯಲಾಗಿದೆ ಎಂದು ತಿಳಿದುಬಂದಿದೆ. ಆದರೆ ಮರಣೋತ್ತರ ಪರೀಕ್ಷೆ ವರದಿಯ ಆಧಾರದ ಮೇಲೆ ನಿಖರವಾದ ಮಾಹಿತಿ ನೀಡಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯು ಇತ್ತೀಚೆಗಷ್ಟೇ ಸ್ನಾತಕೋತ್ತರ ಪದವಿ ಮುಗಿಸಿ ಅಮೆರಿಕದಿಂದ ಹೈದರಾಬಾದ್ಗೆ ಮರಳಿದ್ದ. ಈ ದೂರಿನ ಆಧಾರದ ಮೇಲೆ ಆರೋಪಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿ, ಬಂಧಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಪತಿಯ ಕೊಂದ ಪತ್ನಿ ಬಂಧನ : ಪೊಲೀಸ್ ಆಯುಕ್ತರು ಹೇಳಿದ್ದೇನು?