ಅಶ್ವರಾವ್ಪೇಟ(ತೆಲಂಗಾಣ): ಇಲ್ಲಿನ ಎಂಪಿಪಿ(ಮಂಡಲ ಪ್ರಜಾ ಪರಿಷತ್ ಅಧ್ಯಕ್ಷ) ಜಲ್ಲಿಪಲ್ಲಿ ಶ್ರೀರಾಮಮೂರ್ತಿ ಎಂಬವರು ತಮ್ಮ ಕಚೇರಿಯಲ್ಲಿ ಹಲವು ವರ್ಷಗಳಿಂದ ಶ್ರದ್ಧೆಯಿಂದ ಸೇವೆ ಸಲ್ಲಿಸುತ್ತಿರುವ ಸ್ವೀಪರ್ ಕುಮಾರಿ ಅವರ ಪಾದಗಳನ್ನು ತೊಳೆಯುವ ಮೂಲಕ ಗೌರವ ಸಲ್ಲಿಸಿದ ಅಪರೂಪದ ಘಟನೆ ಭದ್ರಾದ್ರಿ ಕೊತಗುಡೆಂ ಜಿಲ್ಲೆಯ ಅಶ್ವರಾವ್ಪೇಟೆಯಲ್ಲಿ ನಡೆದಿದೆ. ಅಶ್ವರಾವ್ಪೇಟ ಎಂಪಿಪಿ ಜಲ್ಲಿಪಲ್ಲಿ ಶ್ರೀರಾಮಮೂರ್ತಿ ಅವರ ಅಧಿಕಾರಾವಧಿ ಶೀಘ್ರದಲ್ಲೇ ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅವರು ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿದ್ದರು.
ಈ ಸಮಾರಂಭದಲ್ಲಿ ಸ್ವತಃ ಎಂಪಿಪಿ ಜಲ್ಲಿಪಲ್ಲಿ ಶ್ರೀರಾಮಮೂರ್ತಿ ದಂಪತಿ, ತಮ್ಮ ಕಚೇರಿಯನ್ನು ಸ್ವಚ್ಛಗೊಳಿಸುವ ಸ್ವೀಪರ್ ಕುಮಾರಿ ಅವರ ಪಾದಗಳನ್ನು ತೊಳೆದರು. ಮಾತ್ರವಲ್ಲದೇ ಗೌರವ ಮತ್ತು ನಮ್ರತೆಯ ಸಂಕೇತವಾಗಿ ಪಾದ ತೊಳೆದ ನೀರನ್ನು ತಮ್ಮ ತಲೆಯ ಮೇಲೆ ಸಿಂಪಡಿಸಿಕೊಂಡರು. ಬಳಿಕ ಕುಮಾರಿ ಅವರ ಪಾದಗಳಿಗೆ ಪುಷ್ಪ ನಮನ ಸಲ್ಲಿಸಿ ಅವರ ಆಶೀರ್ವಾದ ಪಡೆದರು. ಸದ್ಯ ಈ ವಿಚಾರ ಜಿಲ್ಲಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಈ ಕುರಿತು ಎಂಪಿಪಿ ಶ್ರೀರಾಮಮೂರ್ತಿ ಮಾತನಾಡಿ, ಸ್ವೀಪರ್ ಕುಮಾರಿ ಅವರು ಪ್ರತಿದಿನ ಬೆಳಗ್ಗೆ ನನ್ನ ಕೊಠಡಿಯನ್ನು ಸ್ವಚ್ಛಗೊಳಿಸುವುದಷ್ಟೇ ಅಲ್ಲದೇ ನನಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದಾರೆ. ಆಕೆಯ ಸೇವೆಗೆ ಕೃತಜ್ಞತೆ ಸಲ್ಲಿಸಲು ಪಾದಗಳನ್ನು ತೊಳೆದು ಪಾದಾಭಿವಂದನೆ ಮಾಡಿದೆ ಎಂದು ಹೇಳಿದರು.
ಇದನ್ನೂ ಓದಿ: ಕಡಲಿಗಿಳಿಯುವ ಕೆಚ್ಚೆದೆಯ ಯುವತಿ; ಮೀನು ಉಪ್ಪಿನಕಾಯಿ ಉದ್ಯಮದಲ್ಲಿ ಯಶ ಸಾಧಿಸಿದ ಛಲಗಾತಿ - From Fisher Girl To Entrepreneur