ಭಾವನಗರ(ಗುಜರಾತ್): ಇಲ್ಲಿನ ವ್ಯಕ್ತಿಯೊಬ್ಬರು ವಿಶ್ವದಲ್ಲೇ ಅತ್ಯಂತ ಕುಳ್ಳಗಿನ ವೈದ್ಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಹೌದು, ಭಾವನಗರ ಜಿಲ್ಲೆಯ ಸಾಮಾನ್ಯ ರೈತ ಕುಟುಂಬಕ್ಕೆ ಸೇರಿದ, ಕೇವಲ 3 ಅಡಿ ಎತ್ತರವಿರುವ ಡಾ. ಗಣೇಶ್ ಬಾರಯ್ಯ ಅವರು ಎಲ್ಲ ಅಡೆತಡೆಗಳನ್ನು ಮೆಟ್ಟಿ ನಿಂತು ಎಂಬಿಬಿಎಸ್ ಪೂರ್ಣಗೊಳಿಸಿ ಸದ್ಯ Sir-T ಆಸ್ಪತ್ರೆಯಲ್ಲಿ ಇಂಟರ್ನ್ಶಿಪ್ ಮಾಡುತ್ತಿದ್ದಾರೆ. ಭಾವನಗರ ಜಿಲ್ಲೆಯ ತಲಜಾ ತಾಲೂಕಿನ ಗೋರ್ಖಿ ಗ್ರಾಮದ ನಿವಾಸಿ ವಿಠ್ಠಲಭಾಯಿ ಬಾರಯ್ಯ ಕೃಷಿ ಕುಟುಂಬ ಸೇರಿದವರು. ಇವರಿಗೆ ಏಳು ಮಂದಿ ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳು. ಇವರಲ್ಲಿ 23 ವರ್ಷದ ಡಾ. ಗಣೇಶ್ ಬಾರಯ್ಯ ಎಂಟನೇಯವರಾಗಿದ್ದಾರೆ.

ಈ ಕುರಿತು ಗಣೇಶ್ ಬಾರಯ್ಯ ಮಾತನಾಡಿ, ಗೋರ್ಖಿ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ವಿದ್ಯಾಭ್ಯಾಸ ಮುಗಿಸಿ ನಂತರ ತಲಜಾದ ನೀಲಕಂಠ ವಿದ್ಯಾಪೀಠದಿಂದ 12ನೇ ತರಗತಿ ವಿಜ್ಞಾನ ವಿಭಾಗದಿಂದ ಶೇಕಡಾ 87 ರಷ್ಟು ಅಂಕಗಳೊಂದಿಗೆ ಉತ್ತೀರ್ಣನಾಗಿದ್ದೇನೆ. ಬಳಿಕ ನೀಟ್ ಪರೀಕ್ಷೆಯಲ್ಲಿ 720 ಅಂಕಗಳಿಗೆ 233 ಅಂಕಗಳನ್ನು ಗಳಿಸಿದ್ದೇನೆ. ಎತ್ತರದ ಕಾರಣದಿಂದ ವೈದ್ಯಕೀಯ ಮಂಡಳಿ ನನಗೆ ಎಂಬಿಬಿಎಸ್ ಪ್ರವೇಶವನ್ನು ನಿರಾಕರಿಸಿತ್ತು. ಇದರಿಂದಾಗಿ ನಾನು ದೊಡ್ಡ ಸವಾಲನ್ನು ಎದುರಿಸಬೇಕಾಯಿತು. ನಂತರ ಸಂಸದೆ ಭಾರತಿ ಬೆನ್ ಶಾಯಲ್ ಅವರ ಸಹಾಯದಿಂದ ಮಾಜಿ ಶಿಕ್ಷಣ ಸಚಿವ ಭೂಪೇಂದ್ರ ಸಿಂಗ್ ಚುಡಾಸಮಾ ಮತ್ತು ಆಗಿನ ಕಲೆಕ್ಟರ್ ಹರ್ಷದ್ ಪಟೇಲ್ ಅವರೊಂದಿಗೆ ಚರ್ಚಿಸಿ, ಅಂತಿಮವಾಗಿ, ಹೈಕೋರ್ಟ್ ಮೊರೆ ಹೋಗಲು ನಿರ್ಧರಿಸಿದೆ ಎಂದರು.

2019ರಲ್ಲಿ ಎಂಬಿಬಿಎಸ್ ಪದವಿಗೆ ಪ್ರವೇಶ: ಹಣಕಾಸಿನ ಸಮಸ್ಯೆಯಿಂದಾಗಿ ನನ್ನ ತಂದೆ ವಿಠ್ಠಲಭಾಯಿ ನ್ಯಾಯಾಲಯದ ಮೆಟ್ಟಿಲೇರಲು ನಿರಾಕರಿಸಿದರು. ಆದರೆ, ತಲಜಾ ನೀಲಕಂಠ ವಿದ್ಯಾಪೀಠದ ದಲಪತಭಾಯ್ ಮತ್ತು ರೈವತ್ ಸಿಂಗ್ ನನಗೆ ಎಂಬಿಬಿಎಸ್ ಪ್ರವೇಶವನ್ನು ನಿರಾಕರಿಸಿದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದರು. ಆದರೆ, ಹೈಕೋರ್ಟ್ನಲ್ಲಿ ನಮಗೆ ಸೋಲಾಯಿತು ಬಳಿಕ ಸುಪ್ರೀಂ ಮೆಟ್ಟಿಲೇರಿದೆವು, PWD ನಿಯಮಗಳ ಪ್ರಕಾರ, 40 ರಿಂದ 80 ರಷ್ಟು ಅಂಕಗಳೊಂದಿಗೆ ಎಂಬಿಬಿಎಸ್ಗೆ ಪ್ರವೇಶ ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಅಂತಿಮವಾಗಿ ಆದೇಶಿಸಿತು. ಇದರಿಂದಾಗಿ 1 ಆಗಸ್ಟ್ 2019 ರಂದು ನಾನು ಎಂಬಿಬಿಎಸ್ ಪದವಿಗೆ ಪ್ರವೇಶವನ್ನು ಪಡೆದುಕೊಂಡೆ ಎಂದು ತಿಳಿಸಿದರು.

ಚರ್ಮರೋಗ ತಜ್ಞರಾಗಲು ಬಯಸಿರುವ ಗಣೇಶ್: ಎಂಬಿಬಿಎಸ್ ವ್ಯಾಸಂಗವನ್ನು ಪೂರ್ಣಗೊಳಿಸಿ ಪ್ರಸ್ತುತ ಸರ್ - ಟಿ ಆಸ್ಪತ್ರೆ ಇಂಟರ್ನ್ಶಿಪ್ ಮಾಡುತ್ತಿದ್ದೇನೆ. ನಾನು ಮುಂದೆ ಚರ್ಮರೋಗ ಶಾಸ್ತ್ರದಲ್ಲಿ ಪಿಜಿ ಮಾಡಲು ಬಯಸಿದ್ದೇನೆ. ಹ್ಯುಮಾನಿಟಿ ಮೆಹಕ್ ಫೌಂಡೇಶನ್ ಅನ್ನು ಸಹ ಸ್ಥಾಪಿಸಿದ್ದೇನೆ. ಚರ್ಮರೋಗ ತಜ್ಞರಾಗುವ ಮೂಲಕ ಚರ್ಮದ ಕಾಯಿಲೆಗಳಲ್ಲಿ ಪರಿಣತಿ ಪಡೆಯಲು ಬಯಸಿರುವುದಾಗಿ ಹೇಳಿದರು.
ಗಣೇಶ್ ಬಾರಯ್ಯ ಅತ್ಯಂತ ಶ್ರಮಜೀವಿ: ಭಾವನಗರ ವೈದ್ಯಕೀಯ ಕಾಲೇಜಿನ ಹೆಚ್ಚುವರಿ ಡೀನ್ ಡಾ.ಅಮಿತ್ ಪರ್ಮಾರ್ ಮಾತನಾಡಿ, ಗಣೇಶ್ ಬಾರಯ್ಯ ಎಂಬಿಬಿಎಸ್ ಕೋರ್ಸ್ಗೆ 2019ರಲ್ಲಿ ಪ್ರವೇಶ ಪಡೆದರು. ಅವರ ಎತ್ತರ 3 ಅಡಿ ಆಗಿತ್ತು. ಅವರು ಆರಂಭದಲ್ಲಿ ಎತ್ತರದ ಕಾರಣದಿಂದಾಗಿ ಸಾಕಷ್ಟು ಕಷ್ಟಪಡಬೇಕಾಯಿತು. 2019ರಲ್ಲಿ ಸುಪ್ರೀಂ ಕೋರ್ಟ್ನ ಆದೇಶದ ಮೇರೆಗೆ ಅವರಿಗೆ ಎಂಬಿಬಿಎಸ್ ಪದವಿಗೆ ಪ್ರವೇಶ ನೀಡಲಾಯಿತು. ಗಣೇಶ್ ಬಾರಯ್ಯ ಅತ್ಯಂತ ಶ್ರಮಜೀವಿ, ಪದವಿಯ ಭಾಗ 2 ಮತ್ತು 3ರ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಎಂಬಿಬಿಎಸ್ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಪ್ರಸ್ತುತ ಅವರ ಇಂಟರ್ನ್ಶಿಪ್ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಜಗಳದಿಂದ ಕೋಪಗೊಂಡು ಬಾವಿಗೆ ಹಾರಿದ ಪತಿ: ತಾನೂ ಜಿಗಿದು ಗಂಡನ ರಕ್ಷಿಸಿದ ಪತ್ನಿ