ನವದೆಹಲಿ: ಶತಮಾನಗಳ ಕನಸು ನನಸಾದ ದಿನ, ಭವ್ಯ ರಾಮ ಮಂದಿರ ಉದ್ಘಾಟನೆಯಾದ ಜನವರಿ 22 ರಂದು ದೇಶಾದ್ಯಂತ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು ಜನತಾ ದಳ (ಯುನೈಟೆಡ್) ಶನಿವಾರ ಲೋಕಸಭೆಯಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು.
ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 22, 2024 ರಂದು ಉದ್ಘಾಟನೆ ಮಾಡಿದರು. ಬಾಲರಾಮನಿಗೆ ಪ್ರಾಣಪ್ರತಿಷ್ಠಾಪನೆ ನಡೆದ ಬಳಿಕ ಭಕ್ತಸಾಗರವೇ ರಾಮನೂರಿಗೆ ಹರಿದು ಬರುತ್ತಿದೆ. ರಾಮ ದರ್ಶನ ನೀಡಿದ ಐತಿಹಾಸಿಕ ದಿನದಂದು ಸಾರ್ವತ್ರಿಕ ರಜೆಯನ್ನಾಗಿ ಘೋಷಿಸಬೇಕು ಎಂದು ಜೆಡಿಯು ಸಂಸದ ಸನೋಶ್ ಕುಮಾರ್ ಪಿಂಟೂ ಆಗ್ರಹಿಸಿದರು.
ಸೀತೆ ಇಲ್ಲದೆ ರಾಮ ಅಪೂರ್ಣ. ಹೀಗಾಗಿ ಸೀತೆ ಜನಿಸಿದ್ದಾಳೆ ಎನ್ನಲಾದ ಬಿಹಾರದಲ್ಲಿ ಭವ್ಯ ಮಂದಿರ ನಿರ್ಮಾಣವಾಗಬೇಕು. ಅದನ್ನು ರಾಜ್ಯ ಸರ್ಕಾರ ಸಾಕಾರ ಮಾಡಲಿದೆ ಎಂದರು.
ಶಿವಾಜಿ ಸ್ಮಾರಕ ಪೂರ್ತಿಗೊಳಿಸಿ: ಉದ್ಧವ್ ಠಾಕ್ರೆ ಬಣದ ಶಿವಸೇನೆ ಸಂಸದ ಅರವಿಂದ್ ಸಾವಂತ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ರಾಮನ ತತ್ವಗಳನ್ನು ಅನುಸರಿಸುವ ಅವಶ್ಯಕತೆಯಿದೆ. ಅಧಿಕಾರಕ್ಕಾಗಿ ಇತರರ ಬೆನ್ನಿಗೆ ಚೂರಿ ಹಾಕಬಾರದು. ಭಗವಾನ್ ರಾಮನು ತಂದೆಯ ಮಾತಿಗಾಗಿ ರಾಜ್ಯವನ್ನು ತೊರೆದು ಅರಣ್ಯ ವಾಸಿಯಾದ. ವಚನ ಪಾಲಕನಾಗಿ ವಿಜೃಂಭಿಸಿದ. ಆದರೆ, ಕೇಂದ್ರ ಸರ್ಕಾರ ಶಿವಾಜಿ ಮಹಾರಾಜರ ಸ್ಮಾರಕ ನಿರ್ಮಾಣ ಮಾಡುವ ವಾಗ್ದಾನವನ್ನು ಪೂರ್ಣ ಮಾಡಿಲ್ಲ ಎಂದು ಟೀಕಿಸಿದರು.
2016 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಛತ್ರಪತಿ ಶಿವಾಜಿ ಮಹಾರಾಜರ ಸ್ಮಾರಕ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರೆವೇರಿಸಿದ್ದರು. ಆದರೆ, ಈವರೆಗೂ ಅದು ಪ್ರಗತಿ ಕಂಡಿಲ್ಲ. ಶೀಘ್ರವಾಗಿ ಅದನ್ನು ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ರಾಮಮಂದಿರ ಚರ್ಚೆ ನಿರಾಕರಿಸಿದ ವಿಪಕ್ಷಗಳು: ಸಂಸತ್ ಅಧಿವೇಶನದ ಕೊನೆಯ ದಿನವಾದ ಇಂದು (ಶನಿವಾರ) ರಾಮಮಂದಿರದ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಕೆಲ ವಿಪಕ್ಷಗಳು ಸದನದಿಂದ ಹೊರನಡೆದವು.
ರಾಮ ಮಂದಿರ ವಿಷಯವನ್ನು ಕಮಲ ಪಕ್ಷ ರಾಜಕಾರಣಕ್ಕೆ ಬಳಸಿಕೊಂಡಿದೆ. ಸಮಾಜದಲ್ಲಿ ಕೋಮು ಸೌಹಾರ್ದವನ್ನು ಕೆಡಿಸಿದೆ. ರಾಜಕೀಯ ಕೋಮುವಾದಗೊಳಿಸುವುದನ್ನು ನಾವು ಸಹಿಸಲ್ಲ ಎಂದು ಸಿಪಿಐ(ಎಂ) ಪಕ್ಷದ ಸಂಸದರು ಸದನದಿಂದ ಹೊರನಡೆದರು. ಇದೇ ವೇಳೆ ಕೇಂದ್ರ ಸರ್ಕಾರ ಹೊರಡಿಸಿರುವ ಶ್ವೇತಪತ್ರವನ್ನು ವಿರೋಧಿಸಿ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸದಸ್ಯರು ಸದನದಿಂದ ಹೊರಬಂದರು.
ಇದನ್ನೂ ಓದಿ: ಭಾರತ ರತ್ನ ಘೋಷಣೆ ಬಗ್ಗೆ ತಕರಾರು ಬೇಡ, ರಾಮ ಮಂದಿರ ದೇಶದ ಸಂಕೇತವಾಗಲಿ: ದೇವೇಗೌಡ