75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ.. ಬಳ್ಳಾರಿ ಬೆಟ್ಟಕ್ಕೆ ದೀಪಾಲಂಕಾರ
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 6 ರಿಂದ ಆಗಸ್ಟ್ 16ರ ವರೆಗೆ ಭಾರತೀಯ ಪುರಾತತ್ವ ಇಲಾಖೆ ವತಿಯಿಂದ ವಿಶ್ವದ ನಾಲ್ಕು ಅತ್ಯಂತ ಪುರಾತನ ಏಕಶಿಲಾ ಬೆಟ್ಟಗಳಲ್ಲಿ ಒಂದಾದ ಬಳ್ಳಾರಿ ಬೆಟ್ಟಕ್ಕೆ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದೆ. ಇದು ರಾತ್ರಿ ವೇಳೆ ನೋಡುಗರ ಗಮನ ಸೆಳೆಯುತ್ತಿದೆ. ಆಗಸ್ಟ್ 15ರ ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ಬಳ್ಳಾರಿ ನಗರದ ಕೋಟೆ ತ್ರಿವರ್ಣ ಧ್ವಜ ಬಣ್ಣಗಳಿಂದ ಕಂಗೊಳಿಸುತ್ತಿದೆ. ಝಗಮಗಿಸುವ ಬೆಳಕಿನಾಟದಲ್ಲಿ ಕೋಟೆ ಹೊಸದೊಂದು ಮೆರಗು ಪಡೆದಂತೆ ತೋರುತ್ತಿದೆ. ಬಳ್ಳಾರಿ ಕೋಟೆಯನ್ನು ಬಳ್ಳಾರಿ ಗುಡ್ಡದ ಕೋಟೆಯನ್ನೊಳಗೊಂಡ ಬೆಟ್ಟವನ್ನೇ ಪರದೆಯ ರೂಪದಲ್ಲಿ ಬಳಸಿಕೊಂಡು ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳ ದೀಪಾಲಂಕಾರ ಮಾಡಲಾಗಿದೆ. ವಿಜಯನಗರ ಕಾಲದಲ್ಲಿ ಪಾಳೇಗಾರ ಮುಖ್ಯಸ್ಥ ಹನುಮಪ್ಪ ನಾಯಕರಿಂದ ಈ ಕೋಟೆಯನ್ನು ನಿರ್ಮಿಸಲಾಗಿದ್ದು, ತದನಂತರ ಹೈದರ್ ಅಲಿ ಅವರು ಮರು ಅಭಿವೃದ್ಧಿ ಮಾಡಿದರೆಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ.