ಕರಾವಳಿಯ ಸಾಂಪ್ರದಾಯಿಕ ಕ್ರೀಡೆ 'ಕಂಬಳ' ಅದ್ಧೂರಿ ಆರಂಭ
ಕೊರೊನಾ ಕಾರಣದಿಂದಾಗಿ ಸ್ಥಗಿತಗೊಂಡಿದ್ದ ತುಳುನಾಡಿನ ಸಾಂಪ್ರದಾಯಿಕ ಕ್ರೀಡೆ ಕಂಬಳ ಮತ್ತೆ ಪುನಾರಂಭಗೊಂಡಿದೆ. ಬಂಟ್ವಾಳ ತಾಲೂಕಿನ ಗ್ರಾಮೀಣ ಪ್ರದೇಶವಾದ ಹೊಕ್ಕಾಡಿಗೋಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ಕ್ರೀಡೆ ಕಂಬಳಕ್ಕೆ ಇಂದು ಅದ್ಧೂರಿ ಚಾಲನೆ ದೊರಕಿತು. ಜಿಲ್ಲೆಯ ಮೊದಲ ಕಂಬಳ ಎಂಬ ಹೆಗ್ಗಳಿಕೆ ಹೊತ್ತ ವೀರ ವಿಕ್ರಮ ಕಂಬಳದಲ್ಲಿ 167 ಜೋಡಿ ಕೋಣಗಳು ಪಾಲ್ಗೊಂಡಿದ್ದವು. ಪೂಂಜ ಕ್ಷೇತ್ರದ ಅಸ್ರಣ್ಣ ಕೃಷ್ಣಪ್ರಸಾದ್ ಆಚಾರ್ಯ ಕಂಬಳಕ್ಕೆ ಚಾಲನೆ ನೀಡಿದರು. ಕಂಬಳ ಸಮಿತಿ ಅಧ್ಯಕ್ಷ ನೋಣಾಲ್ ಗುತ್ತು ರಶ್ಮಿತ್ ಶೆಟ್ಟಿ ಕೈತ್ರೋಡಿ ಅಧ್ಯಕ್ಷತೆಯಲ್ಲಿ ನಡೆದ ಕೋಣಗಳ ಓಟದ ಸ್ಪರ್ಧೆಯಲ್ಲಿ ಜೋಡಿ ಕೋಣಗಳು ಸ್ಪರ್ಧೆಗೆ ಇಳಿದಿದ್ದವು. ಇವುಗಳ ಮಾಲೀಕರಲ್ಲಿ ಕೆಲವರು ಮಾಸ್ಕ್ ಧರಿಸಿ ಪಾಲ್ಗೊಂಡಿದ್ದು ಕಂಡುಬಂತು. ಬೆಳಗ್ಗೆ ಕಂಬಳಕ್ಕೆ ಚಾಲನೆ ದೊರೆತ ಕೂಡಲೇ ಓಟದ ಸ್ಪರ್ಧೆಗಳು ಆರಂಭಗೊಂಡವು. ಇವುಗಳನ್ನು ವೀಕ್ಷಿಸಲು ದೂರದೂರುಗಳಿಂದ ನೂರಾರು ಮಂದಿ ಆಗಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಕಂಬಳದ ಗತವೈಭವ ಮರಳಿದೆ.