ಪಕ್ಷಿ ಉಳಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಮಾಲೀಕ, ಚಾಲಕ! ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಮುಂಬೈನ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕ ಕಲ್ಪಿಸುವ ಲಿಂಕ್ ರಸ್ತೆಯಲ್ಲಿ ಪಕ್ಷಿಯನ್ನು ಉಳಿಸಲು ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವ ಘಟನೆಯೊಂದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಮೇ 30 ರಂದು ನಡೆದಿದೆ. ಇದರಲ್ಲಿ 43 ವರ್ಷದ ಅಮರ್ ಮನೀಶ್ ಜರಿವಾಲಾ ಅವರು ತಮ್ಮ ಚಾಲಕನೊಂದಿಗೆ ಕಾರಿನಲ್ಲಿ ಪ್ರಯಾಣ ಬೆಳಸಿದ್ದರು. ಇದ್ದಕ್ಕಿದ್ದಂತೆ ಪಕ್ಷಿಯೊಂದು ಅವರ ಕಾರಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದಿದೆ. ಕೂಡಲೇ ಮನೀಶ್ ಕಾರು ನಿಲ್ಲಿಸಿ, ಕೆಳಗೆ ಇಳಿದು, ಪಕ್ಷಿ ಉಳಿಸಲು ಮುಂದಾದರು. ಆದ್ರೆ ಈ ವೇಳೆ ವೇಗವಾಗಿ ಬಂದ ಟ್ಯಾಕ್ಸಿಯೊಂದು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಅಷ್ಟೇ ಅಲ್ಲ ಆ ಟ್ಯಾಕ್ಸಿ ಡ್ರೈವರ್ ತಮ್ಮ ವಾಹನವನ್ನು ನಿಲ್ಲಸದೇ ಪರಾರಿಯಾಗಿದ್ದಾನೆ. ಟ್ಯಾಕ್ಸಿ ಡಿಕ್ಕಿಯ ರಭಸಕ್ಕೆ ಮನೀಶ್ ಮತ್ತು ಆತನ ಚಾಲಕ ಮೇಲಕ್ಕೆ ಹಾರಿ ರಸ್ತೆ ಮೇಲೆ ಬಿದ್ದಿದ್ದಾರೆ. ಘಟನೆಯಲ್ಲಿ ಅಮರ್ ಮನೀಶ್ ಜರಿವಾಲಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಚಾಲಕ ಶ್ಯಾಮ್ ಸುಂದರ್ ಕಾಮತ್ ಕೂಡ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಇಬ್ಬರು ಸಾವನ್ನಪ್ಪಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.