ಹೆಚ್ಡಿಕೆ ಜೊತೆ ಸಿದ್ದರಾಮಯ್ಯ ಕೂಡ ದತ್ತಮಾಲೆ ಹಾಕಲಿ: ಸಿ ಟಿ ರವಿ - ಈಟಿವಿ ಭಾರತ ಕರ್ನಾಟಕ
🎬 Watch Now: Feature Video


Published : Nov 21, 2023, 8:39 PM IST
ಚಿಕ್ಕಮಗಳೂರು: "ಮಾಜಿ ಮುಖ್ಯಮಂತ್ರಿಗಳಾದ ಹೆಚ್ ಡಿ ಕುಮಾರಸ್ವಾಮಿ ಅವರು ನಾನು ದತ್ತಮಾಲೆ ಧರಿಸಿ ಬರುತ್ತೇನೆ ಎಂದಿರುವುದು ಸ್ವಾಗತರ್ಹ" ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಅವರು, "ನಮ್ಮ ಸಮಾಜ ನಿರೀಕ್ಷೆ ಮಾಡುವುದೇ ಇದನ್ನು. ನಾವು ಹಿಂದೂ ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ ಪಡಬೇಕು. ಕುಮಾರಸ್ವಾಮಿ ಅವರ ಹೇಳಿಕೆ ಸಿದ್ದರಾಮಯ್ಯ ಅವರಿಗೂ ಮಾದರಿಯಾಗಲಿ" ಎಂದು ಹೇಳಿದರು.
"ಸಿಎಂ ಸಿದ್ದರಾಮಯ್ಯ ಅವರು ನಿನ್ನೆ ನಾನು ಹಿಂದೂ ಅಲ್ಲವೇ, ನನ್ನ ಹೆಸರಿನಲ್ಲಿ ಸಿದ್ದರಾಮ ಇದ್ದಾನೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಮಾಲೆ ಧರಿಸಿಕೊಂಡು ಬಂದರೆ ನಮ್ಮ ಸತ್ಯದ ಹೋರಾಟಕ್ಕೆ ಇನ್ನಷ್ಟು ಬಲ ಬರುತ್ತದೆ. ನೀವು ಮಾಲೆ ಹಾಕಿದ ಮೇಲೆ ಸಚಿವ ಜಮೀರ್ ಅಹ್ಮದ್ ಅವರು ಮಾಲೆ ಹಾಕೇ ಹಾಕುತ್ತಾರೆ. ಆವಾಗ ನಾವು ಐದು ದಶಕಗಳಿಂದ ಹೋರಾಟ ಮಾಡಿಕೊಂಡು ಬಂದಿರುವುದಕ್ಕೆ ಬಲ ಬರುತ್ತದೆ, ಸತ್ಯ ತಿಳಿಯುತ್ತದೆ" ಎಂದರು.
"ನಮ್ಮ ಧರ್ಮದ ಪ್ರಕಾರ ನಡೆದುಕೊಳ್ಳುವುದಕ್ಕೆ ಯಾರಿಗೆ ಯಾಕೆ ಹೆದರಬೇಕು. ಯಾರೂ ಎಲೆಕ್ಷನ್ ಟೈಮ್ ಹಿಂದೂಗಳಾಗಬಾರದು, ಜೀವನ ಪರ್ಯಂತ ಹಿಂದೂಗಳಾಗಿಯೇ ಇರಬೇಕು. ಹಿಂದುತ್ವದ ವಿಚಾರ ಬಂದಾಗ ಹಿಂದಕ್ಕೆ ತಿರುಗಿ ನೋಡಲೇ ಬಾರದು. ನೀವು ಬರಬೇಕು ಎಂದು ಸಿದ್ದರಾಮಯ್ಯ ಅವರಿಗೆ ವಿನಂತಿ ಮಾಡುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ: ಜಮೀರ್ ಅಹಮದ್ರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು: ಕೆ ಎಸ್ ಈಶ್ವರಪ್ಪ ಒತ್ತಾಯ