ಮಳೆ ಆರ್ಭಟಕ್ಕೆ ಕೆಆರ್ಎಸ್ ಬೃಂದಾವನದಲ್ಲಿ ಧರೆಗುರುಳಿದ ಮರಗಳು: ವಿಡಿಯೋ - ಮಂಡ್ಯ
🎬 Watch Now: Feature Video
ಮಂಡ್ಯ: ಜಿಲ್ಲೆಯಲ್ಲಿ ನಿನ್ನೆ (ಮಂಗಳವಾರ) ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಜಿಲ್ಲೆಯಾದ್ಯಂತ ಅವಾಂತರ ಸೃಷ್ಟಿಯಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಆರ್ಎಸ್ ಬೃಂದಾವನದಲ್ಲಿ ಹಲವು ಬೃಹತ್ ಮರಗಳು ಬುಡಮೇಲಾಗಿವೆ. ಇದರಿಂದ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದ ಸುಂದರ ತಾಣ ಈಗ ಅಸ್ತವ್ಯಸ್ತವಾಗಿದೆ.
ಕೆಆರ್ಎಸ್ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮವಾಗಿ ಪ್ರವಾಸಿಗರಿಗೆ ಪ್ರವೇಶ ನಿಷೇಧಿಸಿದ್ದರಿಂದ ಯಾವುದೇ ಅವಘಡ ಸಂಭವಿಸಿಲ್ಲ. ಬೃಂದಾವನದಲ್ಲಿ ಪಾದಚಾರಿ ಮಾರ್ಗದುದ್ದಕ್ಕೂ ಹಲವು ಮರಗಳು ಧರೆಗುರುಳಿವೆ. ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ. ಸೋಮವಾರ ಸಂಜೆ 4 ಗಂಟೆ ವೇಳೆಗೆ ಗುಡುಗು, ಮಿಂಚಿನ ಆರ್ಭಟದೊಂದಿಗೆ ಆರಂಭವಾದ ಮಳೆ ಕೆಲವು ನಿಮಿಷಗಳ ಕಾಲ ಅಬ್ಬರಿಸಿತು. ಪ್ರವಾಸಿಗರು ಸುರಕ್ಷಿತ ಸ್ಥಳಗಳತ್ತ ದೌಡಾಯಿಸಿದರು. ಮಳೆ ಆರಂಭವಾಗುತ್ತಲೇ ಸೆಸ್ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದರು.
ಬಿರುಗಾಳಿಯ ರಭಸಕ್ಕೆ ಕೆಆರ್ಎಸ್ ಸುತ್ತಮುತ್ತಲ ಗ್ರಾಮಗಳಲ್ಲಿ ಹಲವಾರು ಮನೆಗಳ ಹೆಂಚುಗಳು ಹಾರಿಹೋಗಿವೆ. ಕೆಲವು ಮನೆಗಳಿಗೆ ಚಾವಣಿಯಾಗಿ ಬಳಸಿದ್ದ ಶೀಟ್ಗಳು ಸಹ ತೂರಿಹೋಗಿವೆ. ಸ್ಥಳಕ್ಕೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿಂದು ವರುಣನ ಆರ್ಭಟ: ಇನ್ನೆರೆಡು ದಿನ ಗುಡುಗು ಸಹಿತ ಮಳೆ ಸಾಧ್ಯತೆ