ಮೈಸೂರು: ರಾಜ ಪರಿವಾರಕ್ಕೆ ಸೊಂಡಿಲೆತ್ತಿ ನಮಸ್ಕರಿಸಿದ ಪಟ್ಟದ ಆನೆ- ವಿಡಿಯೋ
Published : Oct 23, 2023, 6:20 PM IST
|Updated : Oct 23, 2023, 8:40 PM IST
ಮೈಸೂರು: ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಆಯುಧ ಪೂಜೆ ಮುಗಿಸಿ ಹೊರಟ ಪಟ್ಟದ ಆನೆ ಹಾಗೂ ನಿಶಾನೆ ಆನೆ, ಗ್ಯಾಲರಿಯಲ್ಲಿ ಪೂಜೆ ವೀಕ್ಷಿಸುತ್ತಿದ್ದ ರಾಜ ಪರಿವಾರಕ್ಕೆ ಸೊಂಡಿಲೆತ್ತಿ ನಮಸ್ಕರಿಸಿದವು. ಇದಕ್ಕೆ ಪ್ರತಿಯಾಗಿ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಕೂಡಾ ಕೈ ಮುಗಿದು ನಮಸ್ಕರಿಸಿದರು.
ಆಯುಧ ಪೂಜೆ ಹಿನ್ನೆಲೆಯಲ್ಲಿ ಶುಭ ಲಗ್ನದಲ್ಲಿ ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಆನೆಗಳಿಗೆ ಸಾಂಪ್ರದಾಯಿಕ ಪೂಜೆಯನ್ನು ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಸಲ್ಲಿಸುತ್ತಿದ್ದರು. ಇದನ್ನು ಅರಮನೆಯ ಗ್ಯಾಲರಿಯಲ್ಲಿ ಪ್ರಮೋದಾ ದೇವಿ ಒಡೆಯರ್, ಯದುವೀರ್ ಪತ್ನಿ ತ್ರಿಶಿಕಾ ಒಡೆಯರ್, ಪುತ್ರ ಆದ್ಯವೀರ್ ಗ್ಯಾಲರಿಯಿಂದ ವೀಕ್ಷಿಸುತ್ತಿದ್ದರು. ಪೂಜೆ ನೆರವೇರಿದ ಬಳಿಕ ಪಟ್ಟದ ಆನೆಗಳು ಹೊರಡುವುದಕ್ಕೆ ಸಿದ್ದವಾಗಿ ಕನ್ನಡಿ ತೊಟ್ಟಿಯಲ್ಲಿ ನಿಂತಿದ್ದವು. ಈ ಸಂದರ್ಭದಲ್ಲಿ ಪಟ್ಟದ ಆನೆ ಭೀಮ ಹಾಗೂ ನಿಶಾನೆ ಆನೆ ಧನಂಜಯ ತನ್ನ ಸೊಂಡಿಲೆತ್ತಿ ಶಬ್ಧ ಮಾಡಿ ರಾಜ ಪರಿವಾರಕ್ಕೆ ನಮಸ್ಕರಿಸಿದವು. ರಾಜಮಾತೆಯೂ ಕೈ ಮುಗಿದು ನಮಸ್ಕರಿಸಿದರು.
ಗಮನ ಸೆಳೆದ ಸುಗ್ರಿವ-ಕಂಜನ್ ಗೆಳೆತನ: ಈ ವೇಳೆ ಇದೇ ಮೊದಲ ಬಾರಿಗೆ ದಸರಾ ಮಹೋತ್ಸವದ ಗಜಪಡೆ ತಂಡದಲ್ಲಿ ಪಾಲ್ಗೊಂಡಿರುವ ಪಟ್ಟದ ಆನೆ ಹಾಗೂ ನಿಶಾನೆ ಆನೆಗಳಾದ ಸುಗ್ರಿವ ಹಾಗೂ ಕಂಜನ್ ಗೆಳೆತನವು ಪ್ರವಾಸಿಗರಿಗೆ ಮುದ ನೀಡಿತು. ಎರಡು ತಿಂಗಳಿನಿಂದ ಗಜಪಡೆಯ ತಂಡದಲ್ಲಿರುವ ಆನೆಗಳು, ಬೇರೆ ಬೇರೆ ಆನೆ ಶಿಬಿರಗಳಿಂದ ಬಂದಿವೆ. ಅರಮನೆಯ ವಾತಾವರಣಕ್ಕೆ ಹೊಂದಿಕೊಂಡ ಆನೆಗಳು ಪರಸ್ಪರ ಸ್ನೇಹ ಹೊಂದಿವೆ.
ಬಂಡೀಪುರದ ರಾಂಪುರ ಕ್ಯಾಂಪ್ನ ಕಂಜನ್ ಹಾಗೂ ದುಬಾರೆ ಕ್ಯಾಂಪ್ನ ಸುಗ್ರೀವ ಆನೆಗಳು ಒಂದೇ ಶೆಡ್ನಲ್ಲಿ ಅಕ್ಕಪಕ್ಕದಲ್ಲಿಯೇ ಇರುವುದರಿಂದ ಉತ್ತಮ ಸ್ನೇಹ ಬೆಳೆದಿದೆ. ಎರಡನೇ ತಂಡದಲ್ಲಿ ಬಂದು ಈ ಆನೆಗಳು ಒಂದೂವರೆ ತಿಂಗಳಿನಿಂದ ಒಟ್ಟಿಗೆ ಇವೆ. ತಾಲೀಮಿಗೆ ಕರೆದುಕೊಂಡು ಹೋಗುವಾಗಲು ಒಂದರ ಹಿಂದೆ ಒಂದು ಹೋಗುತ್ತವೆ.
ಇದನ್ನೂ ಓದಿ: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ನೆರವೇರಿಸಿದ ಯದುವೀರ್: ವಿಡಿಯೋ