ಯಾದಗಿರಿ: ಜಿಲ್ಲಾ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಉಪನಿರ್ದೇಶಕ ಶರಣಗೌಡ ಪಾಟೀಲ್ ಅವರು ಇಲ್ಲಿನ ಎಪಿಎಂಸಿ ಆವರಣದಲ್ಲಿ ಚಳಿ, ಗಾಳಿ-ಮಳೆಯಲ್ಲಿ ಮಲಗಿ ರೋಗಗ್ರಸ್ತರಾಗಿದ್ದ ವೃದ್ಧೆಗೆ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.
ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಶಿವಾಜಿನಗರದ ವೃದ್ಧೆ ಹೊನ್ನಮ್ಮ ಅವರನ್ನು ಮಗ ಸಿದ್ದಪ್ಪ ಮೂರು ತಿಂಗಳ ಹಿಂದೆ ಮನೆಯಿಂದ ಹೊರಹಾಕಿದ್ದ. ಹೀಗಾಗಿ ಆಕೆ ಊರಿನ ಎಪಿಎಂಸಿ ಆವರಣದಲ್ಲೇ ರೈತರು ನೀಡುತ್ತಿದ್ದ ತಿಂಡಿ ತಿನಿಸುಗಳನ್ನೇ ಸೇವಿಸಿ ಕೊರೆಯುವ ಚಳಿಯಲ್ಲಿ ದಿನ ಕಳೆಯುತ್ತಿದ್ದಳು.
ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿ ಶರಣಗೌಡ ಸ್ಥಳಕ್ಕೆ ಭೇಟಿ ನೀಡಿ ಹೊನ್ನಮ್ಮ ಅವರ ಸೊಸೆ ಮತ್ತು ಮಗನಿಗೆ ತಿಳಿ ಹೇಳಿದ್ದಾರೆ. ನಿಮ್ಮ ಕೈಯಿಂದ ಪೋಷಕರನ್ನು ಸಲುಹಲು ಆಗದಿದ್ದರೆ ಹೇಳಿ, ಇಲಾಖೆಯಿಂದ ಅವರನ್ನು ರಕ್ಷಿಸುತ್ತೇವೆ. ಇಲಾಖೆ ಇರುವುದೇ ಅವರ ರಕ್ಷಣೆಗಾಗಿ ಎಂದರು.