ಯಾದಗಿರಿ : ಕಿಲ್ಲರ ಕೊರೊನಾ ವೈರಸ್ನ ಅಟ್ಟಹಾಸ ಜಿಲ್ಲೆಯಲ್ಲೂ ಮುಂದುವರೆದಿದ್ದು, ಹೆಚ್ಚುತ್ತಿರುವ ಮಹಾಮಾರಿ ವೈರಸ್ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ನಿರ್ಬಂಧಿತ ಪ್ರದೇಶಗಳನ್ನೇನೋ ಘೋಷಣೆ ಮಾಡಿದೆ. ಆದರೆ, ಜಿಲ್ಲಾಡಳಿತ ಘೋಷಣೆ ಮಾಡಿದ ಆದೇಶಕ್ಕೆ ಮಾತ್ರ ಜನ ಕವಡೆಕಾಸಿನ ಕಿಮ್ಮತ್ತೂ ನಿಡುತ್ತಿಲ್ಲ. ಕಂಟೇನ್ಮೆಂಟ್ ಝೋನ್ಗಳಲ್ಲಿನ ನಿವಾಸಿಗಳು ಅಡ್ಡಾದಿಡ್ಡಿ ಓಡಾಡುವ ಮೂಲಕ ಸರ್ಕಾರದ ಆದೇಶ ಉಲ್ಲಂಘಿಸಿ ಭೀತಿ ಹೆಚ್ಚಿಸುತ್ತಿದ್ದಾರೆ.
ಹಸಿರು ವಲಯವಾದ ಯಾದಗಿರಿ ಈಗ ಸಂಪೂರ್ಣ ಕೆಂಪು ವಲಯವಾಗಿ ಮಾರ್ಪಟ್ಟಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 881 ಕ್ಕೆ ಏರಿಕೆಯಾಗುವ ಮೂಲಕ ರಾಜ್ಯದಲ್ಲೇ ಅತಿ ಹೆಚ್ಚು ಕೊರೊನಾ ಪಾಸಿಟಿವ್ ಪ್ರಕರಣಗಳನ್ನ ಹೊಂದಿದ ನಾಲ್ಕನೇ ಸ್ಥಾನಕ್ಕೆ ಯಾದಗಿರಿ ಜಿಲ್ಲೆ ತಲುಪಿದೆ. ಮಹಾರಾಷ್ಟ್ರದಿಂದ ಆಗಮಿಸಿದ ವಲಸಿಗರಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಈ ಸೋಂಕು ಪತ್ತೆಯಾಗುತ್ತಿದ್ದು, ಈಗ ಸಮುದಾಯದ ಹಂತಕ್ಕೂ ಈ ಡೆಡ್ಲಿ ವೈರಸ್ ವ್ಯಾಪಿಸುತ್ತಿದೆ.
ಕೊರೊನಾ ನಿಯಂತ್ರಣಕ್ಕಾಗಿ ಜಿಲ್ಲಾಡಳಿತ ಜಿಲ್ಲಾದ್ಯಂತ 73 ಕಂಟೇನ್ಮೆಂಟ್ ಝೋನ್ ಎಂದು ಘೋಷಣೆ ಮಾಡಿದೆ. ಆದರೆ, ಕಂಟೇನ್ಮೆಂಟ್ ಝೋನ್ ಗಳಲ್ಲಿ ಕೈಗೊಳ್ಳಬೇಕಾದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ಜಿಲ್ಲಾಡಳಿತ ನಿರ್ಲಕ್ಷ್ಯ ತೋರುತ್ತಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಓದಿ:ಯಾದಗಿರಿಯಲ್ಲಿ ಮಹಿಳೆಗೆ ಕೊರೊನಾ: 881ಕ್ಕೆ ಏರಿದ ಸೋಂಕಿತರ ಸಂಖ್ಯೆ
ನಗರದಲ್ಲೀಗ 20 ಕ್ಕೂ ಹೆಚ್ಚು ಜನರಿಗೆ ಈ ಸೋಂಕು ತಗುಲಿದ್ದು, ಜನರನ್ನ ಬೆಚ್ಚಿ ಬಿಳಿಸುವಂತೆ ಮಾಡಿದೆ. ನಾಲ್ಕು ಕಂಟೇನ್ಮೆಂಟ್ ಝೋನ್ ಘೋಷಣೆ ಮಾಡಲಾಗಿದೆ. ಆದರೆ ಈ ನಿರ್ಬಂಧಿತ ಪ್ರದೇಶಗಳಲ್ಲಿ ಸರ್ಕಾರದ ಆದೇಶಗಳು ಮಾತ್ರ ಪಾಲನೆ ಆಗುತ್ತಿಲ್ಲ.