ಗುರುಮಠಕಲ್ (ಯಾದಗಿರಿ): ಇಲ್ಲಿನ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪಟ್ಟಣದ ಗರ್ಭಿಣಿಯೊಬ್ಬರು ಕುಟುಂಬದವರೊಂದಿಗೆ ಹೆರಿಗೆಗಾಗಿ ಬಂದಿದ್ದಾರೆ. ಆದ್ರೆ ವೈದ್ಯರು ಆಕೆಯನ್ನು ನೋಡದೇ ಇಲ್ಲಿ ಯಾವುದೇ ಸೌಲಭ್ಯವಿಲ್ಲ ಎಂದು ಹೇಳಿ, ಯಾದಗಿರಿಗೆ ಹೋಗುವಂತೆ ಸೂಚಿಸಿದ್ದಾರೆ. ಆ್ಯಂಬುಲೆನ್ಸ್ನಲ್ಲಿ ಹೋಗುತ್ತಿರುವಾಗ ಹೆರಿಗೆಯಾಗಿದ್ದು, ಮಗು ಸಾವನ್ನಪ್ಪಿದೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಪಟ್ಟಣದ ಮಾಣಿಕ್ಯಮ್ಮ ಭೀಮಶಪ್ಪ ಎಂಬ ಮಹಿಳೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಆಗಮಿಸಿದ್ದಾರೆ. ಗರ್ಭಿಣಿಯನ್ನು ದಾಖಲಿಸಿಕೊಳ್ಳದ ಸಿಬ್ಬಂದಿ ನಮ್ಮಲ್ಲಿ ಯಾವುದೇ ಸೌಲಭ್ಯಗಳು ಇಲ್ಲ. ಬೇರೆ ಆಸ್ಪತ್ರೆಗೆ ತೆರಳುವಂತೆ ಶಿಫಾರಸು ಮಾಡಿದ್ದಾರೆ. ಅದರಂತೆ ಕುಟುಂಬದ ಸದಸ್ಯರು ಆ್ಯಂಬುಲೆನ್ಸ್ನಲ್ಲಿ ತೆರಳುತ್ತಿರುವಾಗ ಸುಮಾರು 10-15 ನಿಮಷದಲ್ಲಿಯೇ ಹೆರಿಗೆಯಾಗಿದೆ. ಹೆರಿಗೆಯಾದ ಪರಿಣಾಮ ವಾಪಸ್ ಆರೋಗ್ಯ ಕೇಂದ್ರಕ್ಕೆ ಬಂದ ಗರ್ಭಿಣಿ ಮಹಿಳೆಗೆ ಕನಿಷ್ಟ ಉಪಚಾರವನ್ನು ಮಾಡದೇ, ನಿಂದಿಸಿ ಇಲ್ಲಿಗೆ ಬರಬೇಡಿ ಇಲ್ಲಿ ಯಾವುದೇ ರೀತಿಯ ಚಿಕಿತ್ಸೆಗೆ ಸೌಲಭ್ಯಗಳಿಲ್ಲ ಎಂದು ಹರಿಹಾಯ್ದು ಖಾಸಗಿ ಆಸ್ಪತ್ರೆಗೆ ತೆರಳುವಂತೆ ಮಾಡಿದ್ದಾರೆ.
ಅಲ್ಲಿಂದ ಖಾಸಗಿ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಆಗತಾನೆ ಜನಿಸಿದ ಗಂಡು ಮಗು ಕಣ್ಣು ತೆರೆಯುವ ಮುನ್ನವೇ ಕೊನೆಯುಸಿರೆಳೆದಿದೆ. ಘಟನೆಯಿಂದ ಆಕ್ರೋಶಗೊಂಡ ಕುಟುಂಬದವರು ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:ಅಪ್ರಾಪ್ತೆಯರ ಪ್ರೀತಿಸಿ ವಿವಾಹ: ಜಿಲ್ಲಾ ನ್ಯಾಯಾಲಯದಿಂದ ಇಬ್ಬರಿಗೆ 10 ವರ್ಷ ಕಠಿಣ ಸಜೆ
ಸಮುದಾಯ ಆರೋಗ್ಯ ಕೇಂದ್ರದಲ್ಲಿನ ಸಿಬ್ಬಂದಿಗಳ ನಿರ್ಲಕ್ಷ್ಯಕ್ಕೆ ಇಂದು ಮೂರನೇ ಜೀವ ಬಲಿಯಾಗಿದೆ. ಇಲ್ಲಿನ ವ್ಯವಸ್ಥೆಯನ್ನು ಸರಿಮಾಡುವಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕು ಎಂದು ಬಡಾವಣೆಯ ನಿವಾಸಿ ವೆಂಕಟಪ್ಪ ಮನ್ನೆ ಹೇಳಿದ್ದಾರೆ.
ನಮ್ಮ ಸಿಬ್ಬಂದಿಯ ವರ್ತನೆ ಬಗ್ಗೆ ನನಗೆ ದೂರು ಬಂದಿದೆ. ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಮೇಲಧಿಕಾರಿಗಳಿಗೆ ಶಿಫಾರಸು ಮಾಡುತ್ತೇನೆ. ಮುಂದೆ ಈ ರೀತಿ ಘಟನೆ ಮರುಕಳಿಸದಂತೆ ಕ್ರಮ ವಹಿಸುತ್ತೇನೆ ಎಂದು ಗುರುಮಠಕಲ್ ಮೈತ್ರಿ ಆಡಳಿತ ವೈದ್ಯಾಧಿಕಾರಿಯಾದ ಡಾ. ಶಿವಪ್ರಸಾದ ಹೇಳಿದ್ದಾರೆ.