ಸುರಪುರ: ಒಂದೆಡೆ ಲಾಕ್ಡೌನ್ನಿಂದ ಮೂಲ ಸೌಕರ್ಯಗಳು ಸಿಗದೇ ರಾಜ್ಯದ ಜನ ಪರದಾಡುತ್ತಿದ್ದರೆ, ಇನ್ನೊಂದೆಡೆ ತಾಲೂಕಿನ ಮಾರಲಬಾವಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿಂದ ಬೇಸತ್ತ ಜನ, ಪಿಡಿಒ ತಹಸೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರಲಬಾವಿ ಗ್ರಾಮದಲ್ಲಿ 350ಕ್ಕೂ ಹೆಚ್ಚು ಕುಟುಂಬಗಳಿದ್ದು, ಇಡೀ ಗ್ರಾಮದ ಜನ ಕುಡಿಯುವ ನೀರಿಲ್ಲದೇ ಪರದಾಡುತ್ತಿದ್ದಾರೆ. ಗ್ರಾಮದಲ್ಲಿ ನಾಲ್ಕು ಕೊಳವೆ ಬಾವಿಗಳಿವೆ, ಒಂದರಲ್ಲಿಯೂ ನೀರಿಲ್ಲ. ಸದ್ಯ ಉಪ್ಪು ನೀರಿನ ಬಾವಿಯೆ ಗತಿಯಾಗಿದೆ. ಇನ್ನೂ ಈ ಬಾವಿಯಲ್ಲೂ ನೀರು ತಳಕಂಡಿದ್ದು ಒಂದು ಕೊಡ ನೀರು ತುಂಬಲು ಗಂಟೆಗಟ್ಟೆಲೆ ಕಾಯುವ ಅನಿವಾರ್ಯತೆ ಎದುರಾಗಿದೆ.
ಗ್ರಾಮಕ್ಕೆ ತಹಶೀಲ್ದಾರರು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೇಟಿ ನೀಡಿ, ನೀರು ಒದಗಿಸುವ ಭರವಸೆ ನೀಡಿ ಹೋದವರು ಮತ್ತೆ ಗ್ರಾಮದತ್ತ ತಿರುಗಿಯೂ ನೋಡುತ್ತಿಲ್ಲ. ಸದ್ಯ ಇರುವ ಬಾವಿಯಲ್ಲಿನ ಉಪ್ಪು ನೀರು ಕುಡಿದು ಜನರಲ್ಲಿ ರೋಗ ರುಜಿನ ಕಾಣಿಸುತ್ತಿವೆ. ಸರ್ಕಾರ ಕೂಡಲೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.