ಮುದ್ದೇಬಿಹಾಳ: ಪಟ್ಟಣದ ರಿಲಯನ್ಸ್ ಪೆಟ್ರೋಲ್ ಪಂಪ್ನಿಂದ ಹಿರೇಮಠ ಮನೆಯವರೆಗೆ ತೆರಳುವ ರಸ್ತೆಯ ಅಭಿವೃದ್ಧಿಗೆ ಅಡ್ಡಿಯಾಗಿರುವ ಅತಿಕ್ರಮಣಗಳನ್ನು ಸ್ವಯಂಪ್ರೇರಿತವಾಗಿ ನಿವಾಸಿಗಳು ತೆರವುಗೊಳಿಸಿಕೊಂಡು ಅಭಿವೃದ್ಧಿಗೆ ಸಹಕರಿಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕಾಸೆ ಮನವಿ ಮಾಡಿದರು.
ಪಟ್ಟಣದ ಮಾರುತಿ ನಗರದಲ್ಲಿ ಪ್ರಮುಖ ರಸ್ತೆಗಳ ಸುಧಾರಣೆಗೆ ಅಗತ್ಯವಾಗಿರುವ ರಸ್ತೆ ಅತಿಕ್ರಮಣ ಹಾಗೂ ವಿದ್ಯುತ್ ಕಂಬಗಳ ಸ್ಥಳಾಂತರದ ಕುರಿತು ಹೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಮಾರುತಿ ನಗರದಲ್ಲಿ ಈ ಎರಡು ಪ್ರಮುಖ ರಸ್ತೆಗಳ ಅಗಲ 6 ಮೀಟರ್ ಇದ್ದು ಕೆಲವೊಬ್ಬರು ಅತಿಕ್ರಮಿಸಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಶಾಸಕರ ಸಹೋದರ ಶಾಂತಗೌಡ ಪಾಟೀಲ ನಡಹಳ್ಳಿ ಅವರು, ಮುಂಬರುವ ಎರಡು ವರ್ಷಗಳಲ್ಲಿ ಮುದ್ದೇಬಿಹಾಳ ಪಟ್ಟಣವನ್ನು ಮಾದರಿ ನಗರವನ್ನಾಗಿಸಲು ಸಾಧ್ಯವಾದಷ್ಟರ ಮಟ್ಟಿಗೆ ಶ್ರಮಿಸಲಾಗುತ್ತದೆ. ಈ ಬಗ್ಗೆ ಶಾಸಕರು ಹೆಚ್ಚಿನ ಅನುದಾನವನ್ನು ಸರ್ಕಾರದಿಂದ ತಂದು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಿದ್ದಾರೆ. ಆದರೆ ನಗರದಲ್ಲಿ ಬೇಕಾಬಿಟ್ಟಿಯಾಗಿ ನಿರ್ಮಾಣವಾಗಿರುವ ಲೇಔಟ್ಗಳಿಂದ ನಗರದ ಸೌಂದರ್ಯಕ್ಕೆ ಅಡ್ಡಿಯಾಗಿದೆ. ಅತಿಕ್ರಮಣಗಳನ್ನು ತೆರವುಗೊಳಿಸಿಕೊಂಡರೆ ಅಗಲವಾದ ರಸ್ತೆಯನ್ನು ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಹೆಸ್ಕಾಂ ಸೆಕ್ಷನ್ ಅಧಿಕಾರಿ ಎಸ್.ಎಸ್.ಪಾಟೀಲ ಮಾತನಾಡಿ, ಮಾರುತಿ ನಗರದಲ್ಲಿರುವ ರಿಲಯನ್ಸ್ ಪೆಟ್ರೋಲ್ ಪಂಪ್ನಿಂದ ಹಿಡಿದು ಹಿರೇಮಠ ಮನೆಯವರೆಗೆ ಅಂದಾಜು 20 ವಿದ್ಯುತ್ ಕಂಬಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ಅಲ್ಲದೇ ಯಲ್ಲಾಲಿಂಗೇಶ್ವರ ಮಠದ ರಸ್ತೆಯ ಅಕ್ಕಪಕ್ಕದಲ್ಲಿ ಬರುವ ವಿದ್ಯುತ್ ಕಂಬಗಳನ್ನು ಚರಂಡಿಯ ಪಕ್ಕದಲ್ಲಿ ಸ್ಥಳಾಂತರಿಸಲಾಗುವುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಯಲ್ಲಾಲಿಂಗೇಶ್ವರ ಮಠಕ್ಕೆ ಹೋಗುವ ರಸ್ತೆಯ ಅಕ್ಕಪಕ್ಕದಲ್ಲಿ ಬರುವ ಮನೆಗಳ ಕಂಪೌಂಡ್ ರಸ್ತೆಯ ಮೇಲೆಯೇ ನಿರ್ಮಿಸಲಾಗಿದ್ದು, ಅದನ್ನು ಮತ್ತೊಮ್ಮೆ ಸರ್ವೆ ನಡೆಸಿ ನಿವಾಸಿಗಳಿಗೆ ನೋಟಿಸ್ ನೀಡಿ ಅತಿಕ್ರಮಣ ತೆರವಿಗೆ ಕ್ರಮ ಕೈಗೊಳ್ಳಲು ಮುಖಂಡ ಶಾಂತಗೌಡ ಪಾಟೀಲ ಅಧಿಕಾರಿಗಳಿಗೆ ಸೂಚಿಸಿದರು.