ಮುದ್ದೇಬಿಹಾಳ: ಕೊರೊನಾ ನಿಯಂತ್ರಣಕ್ಕೆ ಪಟ್ಟಣದ ವಿವಿಧ ವ್ಯಾಪಾರಸ್ಥರು ನಿನ್ನೆಯಿಂದ ಸ್ವಯಂ ಲಾಕ್ಡೌನ್ ಹೇರಿಕೊಂಡಿದ್ದಾರೆ. ವ್ಯಾಪಾರಸ್ಥರಿಂದ ಈ ನಿರ್ಣಯಕ್ಕೆ ಅಭೂತಪೂರ್ವ ಬೆಂಬಲವೂ ವ್ಯಕ್ತವಾಗಿದೆ.
ಲಾಠಿ ಹಿಡಿದ ಪಿಎಸ್ಐ: ಮುದ್ದೇಬಿಹಾಳ ಪಟ್ಟಣವನ್ನು 10 ದಿನಗಳ ಲಾಕ್ಡೌನ್ ಮಾಡುತ್ತಾರೆ ಎಂಬ ಸುದ್ದಿ ಅರಿತ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಟ್ಟಣಕ್ಕೆ ಆಗಮಿಸಿದ್ದರಿಂದ ವಾಹನ ದಟ್ಟಣೆ ಉಂಟಾಯಿತು. ಈ ವೇಳೆ, ಮುಖ್ಯರಸ್ತೆಯಲ್ಲಿ ಉಂಟಾದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಸ್ವತಃ ಪಿಎಸ್ಐ ಮಲ್ಲಪ್ಪ ಮಡ್ಡಿ ಲಾಠಿ ಹಿಡಿದು ನಿಂತು ಸಂಚಾರ ದಟ್ಟಣೆ ನಿಯಂತ್ರಿಸಿದರು.
![Muddebihal](https://etvbharatimages.akamaized.net/etvbharat/prod-images/kn-mbl-ownlokdown-kac-27-02-kac10030_27072020194702_2707f_1595859422_722.jpg)
ಪಟ್ಟಣದಲ್ಲಿ ಬೆಳಗ್ಗೆ 8 ರಿಂದ ಮದ್ಯಾಹ್ನ 2ಗಂಟೆಯವರೆಗೆ ಅರ್ಧ ದಿನ ಲಾಕ್ಡೌನ್ ವಿಧಿಸುವಂತೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲ ವ್ಯಾಪಾರಸ್ಥರು ಬಹುತೇಕವಾಗಿ 2:30 ರವರೆಗೆ ವ್ಯಾಪಾರ ಮಾಡಿ ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದರು. ಬಟ್ಟೆ, ಕಿರಾಣಿ, ರೆಡಿಮೇಡ್, ಎಲೆಕ್ಟ್ರಾನಿಕ್ಸ್, ಚಿನ್ನಾಭರಣ, ಸ್ಟೇಷನರಿ, ಫೋಟೊ ಸ್ಟುಡಿಯೋ, ಪುಸ್ತಕದಂಗಡಿಗಳು, ಸೂಪರ್ ಮಾರ್ಕೆಟ್ಗಳು, ಹಾರ್ಡ್ವೇರ್ ಅಂಗಡಿಗಳು ಬಂದ್ ಆಗಿದ್ದವು. ಮೆಡಿಕಲ್ ಶಾಪ್, ಗೊಬ್ಬರದ ಅಂಗಡಿಗಳು, ಹೋಟೆಲ್, ತರಕಾರಿ, ಹಾಲು, ಬೇಕರಿ ಪದಾರ್ಥ, ಗ್ಯಾರೇಜ್, ಪಾನ್ಶಾಪ್ ,ಮದ್ಯದಂಗಡಿಗಳು, ಬೀದಿ ಬದಿಯ ಹಣ್ಣು, ತರಕಾರಿ ವ್ಯಾಪಾರ ಎಂದಿನಂತೆ ಚಾಲನೆಯಲ್ಲಿದ್ದವು.
ಅಂಗಡಿ ಬಂದ್ ಮಾಡಿಸಿದ ಮುಖಂಡರು: ಪಟ್ಟಣದ ಮುಖ್ಯರಸ್ತೆಯಲ್ಲಿ ಸಮಯ ಮಧ್ಯಾಹ್ನ 2:30 ಮೀರಿದ್ದರೂ ಇನ್ನೂ ಅಂಗಡಿ ಬಂದ್ ಮಾಡುವ ಸೂಚನೆ ಕಂಡು ಬರಲಿಲ್ಲ. ಇದನ್ನು ಅರಿತ ವಿವಿಧ ವ್ಯಾಪಾರಿ ಸಂಘಟನೆಯ ಮುಖಂಡರು, ನಿನ್ನೆ ಕೈಗೊಂಡ ನಿರ್ಣಯದಂತೆ ಸ್ವಯಂಪ್ರೇರಿತ ಬಂದ್ ಮಾಡುವಂತೆ ಅಂಗಡಿ ಮಾಲೀಕರಿಗೆ ತಿಳಿ ಹೇಳಿದರು. ಈ ವೇಳೆ ಅಂಗಡಿಯಲ್ಲಿ ಅಂದಾಜು 30ಕ್ಕೂ ಹೆಚ್ಚು ಜನ ಗುಂಪು ಗೂಡಿದವರು ದಿಢೀರ್ ಹೊರಗಡೆ ಓಡೋಡಿ ಬಂದರು.