ವಿಜಯಪುರ: ಸಿಎಂ ಯಡಿಯೂರಪ್ಪ ವಿರುದ್ಧ ಫೇಸ್ಬುಕ್, ಟ್ವಿಟರ್ ಮೂಲಕ ತೀವ್ರ ಕಿಡಿಕಾರುತ್ತಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಈಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ತಮ್ಮ ಬೆಂಬಲಿಗರು ಮಾಡಿರುವ ಕಟು ಟೀಕೆಯ ಪೋಸ್ಟ್ ಟ್ಯಾಗ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಸಿಎಂ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಮಾಡಿರುವ ಆರೋಪಕ್ಕೆ ನಿನ್ನೆ ಸಚಿವ ಕೆ.ಎಸ್.ಈಶ್ವರಪ್ಪ, ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಆಗ್ರಹಿಸಿದ್ದರು. ಈ ಹೇಳಿಕೆಗೆ ಖಾರವಾಗಿ ಫೇಸ್ಬುಕ್ ಮೂಲಕ ಯತ್ನಾಳ್ ಬೆಂಬಲಿಗ ಎನ್ನಲಾದ ಅಂಕುಶ ವಸಿಷ್ಟ, ಈಶ್ವರಪ್ಪನವರೇ ಹರಕು ಬಾಯಿ ಯಾರದ್ದು ಅಂತ ನಮಗೆ ಚೆನ್ನಾಗಿ ಗೊತ್ತಿದೆ. ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಛಾಟಿಸುವದಾದರೆ ನಿಮ್ಮನ್ನು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ಈ ಪೋಸ್ಟ್ಗೆ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಮ್ಮ ಫೇಸ್ಬುಕ್ ಅಕೌಂಟ್ ಮೂಲಕ ಟ್ಯಾಗ್ ಮಾಡಿದ್ದಾರೆ. ಇದರ ಜೊತೆ ಸಾಕಷ್ಟು ಲೈಕ್ಗಳು ಈ ಪೋಸ್ಟ್ಗಳಿಗೆ ಬಂದಿದ್ದು, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ರೀತಿ ಕರ್ನಾಟಕದಲ್ಲಿ ಬಸನಗೌಡ ಪಾಟೀಲ ಯತ್ನಾಳ್ ಆಗಬೇಕು. ಬಸನಗೌಡ ಪಾಟೀಲ ಯತ್ನಾಳ್ ಇಲ್ಲವೇ ಅನಂತಕುಮಾರ ಹೆಗಡೆ ಇಬ್ಬರು ರಾಜ್ಯದ ಸಿಎಂ, ಗೃಹ ಸಚಿವರಾಗಬೇಕು ಎಂದು ಪೋಸ್ಟ್ ಮೂಲಕ ಆಗ್ರಹಿಸಿದ್ದಾರೆ.