ವಿಜಯಪುರ: ಎಂಬಿಎ ಮುಗಿಸಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದವ ಯುವಕನೋರ್ವ ಕೆಲಸ ಬಿಟ್ಟು ಬಂದು ತಮ್ಮ ಹಳ್ಳಿಯಲ್ಲಿದ್ದ ಜಮೀನಿನಲ್ಲಿ ಆಡು ಸಾಕಿ ಲಕ್ಷಾಂತರ ರೂ. ಆದಾಯ ಸಂಪಾದಿಸುತ್ತಿದ್ದಾನೆ.
ವಿಜಯಪುರ ನಗರದ ಗ್ಯಾಂಗಬಾವಡಿ ಬಡಾವಣೆಯ ನಿವಾಸಿ ಸಾಯಿನಾಥ್ ಶೇರಖಾನೆ ಎಂಬುವವರು ಎಂಬಿಎ ಮುಗಿದ ಬಳಿಕ ಬೆಂಗಳೂರಿನಲ್ಲಿ ಒಂದು ಕಾರ್ಪೊರೇಟ್ ಕಂಪನಿಯಲ್ಲಿ ಹೆಚ್ಆರ್ ಆಗಿ ಕೆಲಸಕ್ಕೆ ಸೇರಿಕೊಂಡು 40 ಸಾವಿರ ರೂ. ಸಂಬಳ ಪಡೆಯುತ್ತಿದ್ದರು. ಆದರೆ ಕೃಷಿ ಮೇಲಿನ ಆಸಕ್ತಿ ಹಿನ್ನೆಲೆಯಲ್ಲಿ ತಾನು ಮಾಡುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ ಮರಳಿ ಊರಿಗೆ ಬಂದು ಈಗ ಮಾದರಿ ರೈತನಾಗಿದ್ದಾನೆ.
ತನಗಿರುವ 8 ಎಕರೆ ಜಮೀನಿನಲ್ಲಿ 6 ಎಕರೆಯಷ್ಟು ಕಬ್ಬು ಹಾಕಿ ಇನ್ನುಳಿದ ಎರಡು ಎಕರೆ ಪ್ರದೇಶದಲ್ಲಿ ಮೇವನ್ನು ಬೆಳೆಸಿದ್ದಾನೆ. ಈ ಮೇವು ಬೆಳೆಸಲು ಪ್ರಮುಖ ಕಾರಣ ಆತ ವಿಭಿನ್ನ ತಳಿಯ ಆಡು ಸಾಕಾಣಿಕೆ ಮಾಡುತ್ತಿರುವುದು. ಪಂಜಾಬ್ ಬಿಟಲ್ ತಳಿಯ ಆಳೆತ್ತರದ ಆಡುಗಳ ಸಾಕಾಣಿಕೆಯಲ್ಲಿ ತೊಡಗಿಕೊಂಡಿದ್ದಾನೆ. ಈ ತಳಿಯ ಆಡುಗಳು ಬಹುಬೇಗ ಬೆಳೆಯುವುದರಿಂದ ಅಧಿಕ ಆದಾಯ ಬರುತ್ತದೆ. ಸಾಮಾನ್ಯ ಆಡುಗಳಿಗಿಂತ ಇವುಗಳು ವಿಭಿನ್ನವಾಗಿ ಕಾಣುವುದರಿಂದ ಇವುಗಳ ಬೇಡಿಕೆ ಸಹಿತ ಹೆಚ್ಚಾಗಿರುತ್ತದೆ.
ಈ ಆಡುಗಳ 1 ತಿಂಗಳ ಮರಿಗೆ ಸುಮಾರು 16 ರಿಂದ 20 ಸಾವಿರ ಹಣ ಕೊಟ್ಟು ಖರೀದಿ ಮಾಡಿಕೊಂಡು ಹೋಗುತ್ತಾರೆ. ಜಿಲ್ಲೆಯ ರೈತರು ಮಾತ್ರವಲ್ಲದೇ ರಾಜ್ಯದ ವಿವಿಧ ಜಿಲ್ಲೆಯ ಹಾಗೂ ಮಹಾರಾಷ್ಟ್ರ ರಾಜ್ಯದ ರೈತರು ಸಹಿತ ಇವರಲ್ಲಿಗೆ ಬಂದು ಆಡುಗಳನ್ನು ಖರೀದಿಸುತ್ತಾರೆ. ಸಾಮಾಜಿಕ ಜಾಲತಾಣದ ಮೂಲಕ ಆಡುಗಳ ವ್ಯಾಪಾರ ವಹಿವಾಟನ್ನು ಸಹ ಇವರು ಮಾಡುತ್ತಾರೆ.
ಆಡುಗಳಿಗಾಗಿಯೇ ಅತ್ಯಾಕರ್ಷಕ ಶೆಡ್ ಅನ್ನು ಕೂಡ ಇವರು ನಿರ್ಮಿಸಿದ್ದು, ಆಡುಗಳು ಹಾಕುವ ಹಿಕ್ಕಿ, ಮೂತ್ರ ಕೆಳಗಡೆ ಬಿದ್ದು ಶೆಡ್ ಕೂಡ ಸ್ವಚ್ಚವಾಗಿರುತ್ತದೆ. ಜತೆಗೆ ಫಲವತ್ತಾದ ಗೊಬ್ಬರ ಕೂಡ ಸಿದ್ದವಾಗುತ್ತದೆ. ಶೆಡ್ ಪಕ್ಕದಲ್ಲೇ ಬಹು ವಾರ್ಷಿಕ ಹಸಿರು ಮೇವನ್ನು ಇವರು ಬೆಳೆಯುತ್ತಿದ್ದಾರೆ. ಅವುಗಳಲ್ಲಿ ಥೈವಾನ್ ಸೂಪರ್ ನೇಪಿಯರ್, ಇಂಡೋನೇಷಿಯಾ ಸ್ಮಾರ್ಟ್ ನೇಪಿಯರ್, ಸಿಒಎಪ್ಎಸ್-31 ತಳಿಯ ಮೇವು, ರೇಷ್ಮೆ ತಪ್ಪಲು, ಕುದುರೆ ಮೆಂತೆ, ಬೇಲಿ ಮೆಂತೆ ಹೀಗೆ ಹಲವು ಬಗೆಯ ಮೇವನ್ನು ಎರಡು ಎಕರೆಯಲ್ಲಿ ಬೆಳೆದು ಆಡುಗಳಿಗೆ ಹಾಕುತ್ತಿದ್ದಾರೆ.
ವರ್ಷಕ್ಕೆ ಆಡುಗಳಿಂದಲೇ ಸುಮಾರು 10 ರಿಂದ 14 ಲಕ್ಷ ರೂ. ಆದಾಯ ಗಳಿಸಿಸುತ್ತಿದ್ದಾರೆ. ಇವರಿಂದ ಹಲವು ಯುವ ರೈತರು ಸಹ ಪ್ರೇರೇಪಣೆಗೊಂಡಿದ್ದಾರೆ. ತಿಂಗಳಿಗೆ 40 ಸಾವಿರ ಸಂಬಳ ಪಡೆಯುತ್ತಿದ್ದ ಕಾರ್ಪೋರೇಟ್ ಸಂಸ್ಥೆಯ ಕೆಲಸಕ್ಕೆ ರಾಜೀನಾಮೆ ನೀಡಿ ಈಗ ಆಡು ಸಾಕಾಣಿಕೆಯಿಂದ ಪ್ರತಿ ವರ್ಷ ಲಕ್ಷಾಂತರ ಲಾಭ ಪಡೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ಕೊಪ್ಪಳದಲ್ಲಿ ಪೊಲೀಸರಿಂದ ಪಥ ಸಂಚಲನ