ದಿನೇ ದಿನೆ ಪ್ರತಿಯೊಂದರ ಬೆಲೆಯೂ ಗಗನಕ್ಕೇರುತ್ತಿದೆ. ಅದರಲ್ಲೂ ಭೂಮಿಗೆ ಎಲ್ಲಿಲ್ಲದ ಬೇಡಿಕೆ ಜತೆಗೆ ಚಿನ್ನದ ಬೆಲೆ ಬಂದಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ಭೂಮಿ ಹೊಡೆದುಕೊಳ್ಳುವ ಕಾಯಕ ಶುರು ಮಾಡಿಕೊಂಡಿದ್ದಾರೆ. ಈ ಮೋಸದಾಟದಲ್ಲಿ ಭೂಮಿ ಕಳೆದುಕೊಳ್ಳುವವರು, ವಂಚನೆಗೊಳಪಟ್ಟವರು ಪೊಲೀಸರ ಬಳಿ ಹೋಗಬೇಕೋ ಅಥವಾ ನ್ಯಾಯಾಲಯದ ಮೊರೆ ಹೋಗಬೇಕೋ ಎನ್ನುವ ಗೊಂದಲದಲ್ಲಿದ್ದಾರೆ.
ಭೂ ಸಂಬಂಧಿತ ವ್ಯಾಜ್ಯಗಳು ನ್ಯಾಯಾಲಯದ ವ್ಯಾಪ್ತಿಗೆ ಬರಲಿದ್ದು, ವಕೀಲರ ಮೂಲಕ ಭೂಮಿ ಲಪಟಾಯಿಸಿದ ವ್ಯಕ್ತಿ ವಿರುದ್ಧ ದಾವೆ ಹೂಡಬಹುದಾಗಿದೆ. ನ್ಯಾಯಾಲಯ ವಾದಿ - ಪ್ರತಿವಾದಿಗಳ ವಾದ ಆಲಿಸಿ ಸಮಸ್ಯೆಗೆ ಪರಿಹಾರ ಒದಗಿಸುವ ತೀರ್ಪು ನೀಡುತ್ತದೆ. ಆದ್ರೆ ಹಲವೆಡೆ ಇಂತಹ ಸಿವಿಲ್ ಪ್ರಕರಣಗಳನ್ನು ಪೊಲೀಸ್ ಠಾಣೆಯೆದುರೇ ರಾಜಿ ಪಂಚಾಯಿತಿ ನಡೆಸಿ ಪೊಲೀಸರು ಸಮಸ್ಯೆ ಬಗೆಹರಿಸುವ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಇದರಿಂದ ವಿಜಯಪುರ ಕೂಡ ಹೊರತಲ್ಲ. ಆದ್ರೆ ಇದನ್ನು ನ್ಯಾಯಾಲಯ ಮಾನ್ಯತೆ ಮಾಡುವುದಿಲ್ಲ. ಭೂ ವ್ಯಾಜ್ಯ ಪ್ರಕರಣಗಳನ್ನು ಪೊಲೀಸ್ ಠಾಣೆಯಲ್ಲಿ ಇತ್ಯರ್ಥಪಡಿಕೊಳ್ಳಲು ನಾವು ಅನುವು ಮಾಡಿಕೊಡುವುದಿಲ್ಲ ಎಂದು ವಿಜಯಪುರ ಎಸ್ಪಿ ತಿಳಿಸಿದ್ದಾರೆ.
ಇನ್ನು ಬೆಣ್ಣೆನಗರಿ ದಾವಣಗೆರೆಯ ಪರಿಸ್ಥಿತಿ ನೋಡುವುದಾದರೆ, ಭೂ ವ್ಯಾಜ್ಯ ಪ್ರಕರಣಗಳನ್ನು ಹಿಡಿದು ಹೆಚ್ಚಿನವರು ನ್ಯಾಯಾಲಯದ ಮೊರೆ ಹೋದ್ರೂ ಕೂಡ ಪೊಲೀಸ್ ಠಾಣೆ ಹೋಗುವವರ ಸಂಖ್ಯೆಯೇನೂ ಇಳಿದಿಲ್ಲ. ಈ ಕುರಿತು ತಿಳಿಯದ ಕಾರಣ ಹಲವರು ಪೊಲೀಸ್ ಠಾಣೆಗೆ ಹೋದ್ರೆ, ಒಂದಿಷ್ಟು ಮಂದಿ ಪ್ರಕರಣವನ್ನು ಶೀಘ್ರ ಇತ್ಯರ್ಥಪಡಿಸಿಕೊಳ್ಳುವ ಸಲುವಾಗಿ ಠಾಣೆಗೆ ಹೋಗ್ತಾರಂತೆ. ಅದರಲ್ಲೂ ಶ್ರೀಮಂತರು, ಅಧಿಕಾರಶಾಹಿಗಳು, ರಾಜಕಾರಣಿಗಳು ಪೊಲೀಸ್ ಠಾಣೆಗೆ ತೆರಳುವುದು ಹೆಚ್ಚು ಎನ್ನುವ ಮಾತು ಕೇಳಿ ಬಂದಿದೆ.
ಇದು ಒಂದೆರಡು ಜಿಲ್ಲೆಯ ಪರಿಸ್ಥಿತಿಯಲ್ಲ. ಹಾಗಾಗಿ ಯಾವ ಪ್ರಕರಣಗಳನ್ನು ಎಲ್ಲಿ ದಾಖಲಿಸಬೇಕು ಎನ್ನುವ ಅರಿವನ್ನು ಜನರಲ್ಲಿ ಮೂಡಿಸುವ ಪ್ರಯತ್ನವನ್ನು ಸಂಬಂಧಪಟ್ಟ ಇಲಾಖೆ ಮಾಡಬೇಕು. ಜತೆಗೆ ಹಣ ಸುರಿದು ಪೊಲೀಸ್ ಠಾಣೆಯಲ್ಲೇ ರಾಜಿ ಸಂಧಾನ ಮಾಡಿಕೊಳ್ಳುವ ಕ್ರಮಕ್ಕೆ ಕಡಿವಾಣ ಹಾಕಬೇಕಿದೆ.