ಮುದ್ದೇಬಿಹಾಳ: ನಾಡಿನ ಜನತೆ ಅದರಲ್ಲೂ ಮುಖ್ಯವಾಗಿ ದೇಶದ ಬೆನ್ನೆಲುಬಾಗಿರುವ ರೈತರು ಕೊರೊನಾ ಸಾಂಕ್ರಾಮಿಕ ರೋಗದ ಹೊಡೆತಕ್ಕೆ ಸಿಲುಕಿ ಸಾಕಷ್ಟು ತೊಂದರೆಯಲ್ಲಿದ್ದಾರೆ. ಇಂತಹ ಸ್ಥಿತಿಯಲ್ಲಿ ತಮ್ಮ ಗುರು ಪಟ್ಟಾಧಿಕಾರ ಮಹೋತ್ಸವ ನಡೆಸುವುದು ಸಮಂಜಸ ಹಾಗೂ ಸೂಕ್ತ ಎನ್ನಿಸುವುದಿಲ್ಲ. ಆದ್ದರಿಂದ ಕೊರೊನಾಗೆ ಲಸಿಕೆ ಸಿಕ್ಕು ಜನತೆ ನೆಮ್ಮದಿಯ ಜೀವನ ಪ್ರಾರಂಭಿಸಿದ ನಂತರವೇ ಪಟ್ಟಾಧಿಕಾರ ಮಹೋತ್ಸವ ನಡೆಸಿಕೊಳ್ಳಲು ತೀರ್ಮಾನಿಸಿದ್ದೇವೆ ಎಂದು ತಾಲೂಕಿನ ಕುಂಟೋಜಿ ಸಂಸ್ಥಾನ ಹಿರೇಮಠದ ಚನ್ನವೀರ ದೇವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ತಮಗೆ ಗುರು ಪಟ್ಟಾಧಿಕಾರ ಮಹೋತ್ಸವ ಮಾಡಬೇಕೆಂದು ಕುಂಟೋಜಿ ಗ್ರಾಮಸ್ಥರು, ಸ್ಥಳೀಯ ಶಾಸಕರು, ಮಾಜಿ ಸಚಿವರು, ಗಣ್ಯ ರಾಜಕೀಯ ಧುರೀಣರು, ಮಠಾಧೀಶರು, ಶ್ರೀಮಠದ ಸದ್ಭಕ್ತರು ಸಂಕಲ್ಪ ಮಾಡಿದ್ದರು. ಈ ವಿಷಯ ತಿಳಿದ ಶ್ರೀಮಠದ ಪ್ರಮುಖ ಗುರುವರ್ಯರಾದ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಡಾ. ಶ್ರೀ ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು, ಬಾಲೇಹೊಸೂರಿನ ಶ್ರೀ ದಿಂಗಾಲೇಶ್ವರ ಮಹಾಸ್ವಾಮಿಗಳು ಕೊರೊನಾ ಸಂಕಷ್ಟ ಮುಗಿದು ಸುಭಿಕ್ಷೆ ಮರಳುವವರೆಗೂ ಪಟ್ಟಾಧಿಕಾರ ಮುಂದೂಡಲು, ಜನತೆಯಲ್ಲಿ ನೆಮ್ಮದಿ ಮರುಸ್ಥಾಪಿತಗೊಂಡ ನಂತರ ವಿಜೃಂಭಣೆಯಿಂದ ನಡೆಸಲು ಸಲಹೆ ನೀಡಿದ ಹಿನ್ನೆಲೆ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಕಾರ್ಯ ಪ್ರಗತಿಯಲ್ಲಿದೆ. ಜನತೆಯೂ ಸಹಿತ ಕೊರೊನಾ ಮಹಾಮಾರಿಯಿಂದ ನಿಧಾನವಾಗಿ ಹೊರಬರುತ್ತಿದ್ದಾರೆ. ಆದರೂ ಜನಜೀವನ ಮೊದಲಿನಂತೆ ಆಗಲು ಇನ್ನೂ ಬಹಳಷ್ಟು ದಿನಗಳನ್ನು ತೆಗೆದುಕೊಳ್ಳುವ ಸಂಭವ ಅಲ್ಲಗಳೆಯುವಂತಿಲ್ಲ. ನಾಡಿನಲ್ಲಿ ಸುಭಿಕ್ಷೆ ನೆಲಸಿದ ನಂತರವೇ ಕುಂಟೋಜಿ ಗ್ರಾಮಸ್ಥರ, ಶ್ರೀಮಠದ ಸದ್ಭಕ್ತರ, ಮಠದ ಹಿತೈಶಿಗಳ, ರಾಜಕೀಯ ಮುಖಂಡರ, ಮಠದ ಬಗ್ಗೆ ಅಭಿಮಾನ ಹೊಂದಿರುವ ಸ್ವಾಮೀಜಿಗಳ ಸಭೆ ಕರೆದು, ಸಮಾಲೋಚನೆ ನಡೆಸಿ ನಂತರವೇ ನಾವು ಪಟ್ಟಾಧಿಕಾರ ಮಾಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.
ಕೆಲ ದಿನಗಳಿಂದ ನಮಗೆ ಪಟ್ಟಾಧಿಕಾರ ಮಾಡುವ ಕುರಿತು ಕುಂಟೋಜಿಯ ಗಣ್ಯರು, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಶಾಸಕ ಎ ಎಸ್ ಪಾಟೀಲ ನಡಹಳ್ಳಿ, ಮಾಜಿ ಸಚಿವ ಸಿ ಎಸ್ ನಾಡಗೌಡ ಅಪ್ಪಾಜಿ, ವಿಜಯಪುರ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಸೇರಿ ಹಲವರು ಸಂಕಲ್ಪ ವ್ಯಕ್ತಪಡಿಸಿದ್ದರು. ಅವರ ಪ್ರೀತಿ,ವಿಶ್ವಾಸಕ್ಕೆ ನಾವು ಚಿರಋಣಿಯಾಗಿದ್ದೇವೆ. ಇದೇ ಪ್ರೀತಿ, ವಿಶ್ವಾಸ ಸರ್ವರಲ್ಲೂ ಸದಾಕಾಲ ಶ್ರೀಮಠದ ಮೇಲಿರಲಿ ಎಂದು ಸ್ವಾಮೀಜಿಯವರು ತಿಳಿಸಿದ್ದಾರೆ.