ಮುದ್ದೇಬಿಹಾಳ : ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಜಾತ್ರೆ ನಡೆಸಿದ ಹಿನ್ನೆಲೆಯಲ್ಲಿ ತಾಲೂಕಿನ ಯರಝರಿ ಗ್ರಾಮದೇವತೆ ಜಾತ್ರಾ ಕಮಿಟಿಯ ಐವರ ವಿರುದ್ಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಸಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಎಸ್ಪಿ ಡಾ.ರಾಮ್ ಅರಸಿದ್ಧಿ ತಿಳಿಸಿದ್ದಾರೆ.
ಪಟ್ಟಣದ ಪೊಲೀಸ್ ಠಾಣೆಗೆ ಶುಕ್ರವಾರ ಭೇಟಿ ನೀಡಿ ಬಸವೇಶ್ವರ ವೃತ್ತದಲ್ಲಿ ಕರ್ಫ್ಯೂ ಜಾರಿಯ ವೇಳೆ ಇಲಾಖೆಯಿಂದ ಕೈಗೊಂಡಿರುವ ಬಿಗಿ ಭದ್ರತೆಯ ಕ್ರಮಗಳನ್ನು ವೀಕ್ಷಿಸಿದರು. ಈ ವೇಳೆ ಮಾತನಾಡಿದ ಅವರು, ಯರಝರಿ ಜಾತ್ರಾ ಕಮಿಟಿಯ ಮಂದೆಪ್ಪ ಬಿ.ಗುರಿಕಾರ, ಬಸಪ್ಪ ಎನ್.ಕವಲಗಿ, ನಿಂಗಪ್ಪ ಎಸ್.ಹಳ್ಳೂರ, ಯಮನಪ್ಪ ಎಸ್.ಕೋಳೂರ, ಖಾನಗೌಡ ಎಸ್.ಬಿರಾದಾರ ಅವರ ವಿರುದ್ಧ ಕಂದಾಯ ನಿರೀಕ್ಷಕ ಮಹಾಂತೇಶ ಮಾಗಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.
ಯರಝರಿ ಗ್ರಾಮದಲ್ಲಿ ಇತ್ತೀಚೆಗೆ ದೊಡ್ಡದಾಗಿ ಶಾಮಿಯಾನ್ ಹಾಕಿ ಅದ್ಧೂರಿಯಾಗಿ ಜಾತ್ರೆ ನಡೆಸಲಾಗಿತ್ತು. ಈ ವೇಳೆ ಪೊಲೀಸ್ ಹಾಗೂ ಕಂದಾಯ ಅಧಿಕಾರಿಗಳು ದಾಳಿ ನಡೆಸಿ ಜನರನ್ನು ಚದುರಿಸಿದ್ದರು.
ಜಿಲ್ಲೆಯ 44 ಪೊಲೀಸರಿಗೆ ಕೊರೊನಾ : ವಿಜಯಪುರ ಜಿಲ್ಲೆಯಲ್ಲಿ ಈವರೆಗೆ 44 ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಅರಸಿದ್ಧಿ ಹೇಳಿದರು.
ಇದನ್ನೂ ಓದಿ : ಕೊರೊನಾ ಸೋಂಕಿತರು ಮೃತಪಟ್ಟರೆ ಅಂತಹವರಿಗೆ ಉಚಿತ ಅಂತ್ಯಕ್ರಿಯೆ: ಹು -ಧಾ ಪಾಲಿಕೆ ನಿರ್ಧಾರ