ಮುದ್ದೇಬಿಹಾಳ(ವಿಜಯಪುರ): ಕರ್ತವ್ಯ ನಿರತ ವೇಳೆ ವಿದ್ಯುತ್ ಶಾರ್ಟ್ ಸರ್ಕಿಟ್ನಿಂದ ಬಿಎಸ್ಎಫ್ ಯೋಧರೊಬ್ಬರು ಜಮ್ಮು ಮತ್ತು ಕಾಶ್ಮೀರದಲ್ಲಿ ಹುತಾತ್ಮರಾಗಿದ್ದಾರೆ. ಸೇನೆಯಿಂದ ಕುಟುಂಬದವರಿಗೆ ದೂರವಾಣಿ ಮೂಲಕ ಮಾಹಿತಿ ಬಂದಿದೆ.
ತಾಲೂಕಿನ ಬಸರಕೋಡದ ಗ್ರಾಮದ ಶಿವಾನಂದ ಜಗನ್ನಾಥ ಬಡಿಗೇರ (31) ಎಂಬ ಯೋಧ ಹುತಾತ್ಮರಾಗಿದ್ದು, 14 ವರ್ಷಗಳ ಹಿಂದೆ ಸೇನೆಗೆ ಸೇರಿದ್ದರು. ಮೊದಲು ಬಾಂಗ್ಲಾ ದೇಶದ ಗಡಿಯಲ್ಲಿ ನಂತರ ಚೀನಾ ಗಡಿಯಲ್ಲಿ ಸೇವೆ ಸಲ್ಲಿಸಿ, ಜಮ್ಮು ಕಾಶ್ಮೀರದ ಗಡಿಯಲ್ಲಿ ನಿಯೋಜನೆಯಾಗಿದ್ದರು.
ಕಳೆದ ಒಂದೂವರೆ ವರ್ಷದ ಹಿಂದೆ ತಾಳಿಕೋಟಿ ತಾಲೂಕಿನ ತುಂಬಗಿಯ ಪುಷ್ಪಾ ಎಂಬುವರ ಜೊತೆಗೆ ಅವರ ವಿವಾಹವಾಗಿತ್ತು. ಮಗನ ಸಾವಿನ ಸುದ್ದಿ ಕೇಳಿದ ತಕ್ಷಣ ತಂದೆ ತಾಯಿ ಪ್ರಜ್ಞಾಹೀನರಾಗಿದ್ದು, ಈ ಕುರಿತು ಅವರ ಸಹೋದರ ಕಾಳಪ್ಪ ಬಡಿಗೇರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಹಾಗೂ ಬೇಗನೇ ತಮ್ಮ ಸಹೋದರನ ಪಾರ್ಥೀವ ಶರೀರ ತರುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.