ಕಾರವಾರ : ಉತ್ತರಕನ್ನಡ ಜಿಲ್ಲೆಯಲ್ಲಿ ಸದ್ಯ ಮಳೆ ಕಡಿಮೆಯಾಗಿದ್ದು ಹಳ್ಳಕೊಳ್ಳಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗಿದೆ. ಆದರೆ, ವಾರಗಳಿಗೂ ಹೆಚ್ಚು ಕಾಲ ಅಬ್ಬರಿಸಿದ ಮಳೆಯಿಂದಾಗಿ ಅಂಕೋಲಾದ ಕೆಲವೆಡೆ ಹಾವುಗಳ ಕಾಟ ಹೆಚ್ಚಾಗಿದೆ. ಮನೆ, ಜಮೀನು ಹೀಗೆ ಎಲ್ಲೆಂದರಲ್ಲಿ ಕಾಣಸಿಗುವ ಹಾವುಗಳಿಂದ ಜನ ಆತಂಕಕ್ಕೊಳಗಾಗಿ ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲೆಯ ಕೇಣಿ, ಆವರ್ಸಾ, ಬೇಲಿಕೇರಿ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಮಳೆಯ ಬಳಿಕ ಹಾವುಗಳು ಸಾಮಾನ್ಯವಾಗಿ ಕಂಡು ಬರುತ್ತಿದೆ. ಸದ್ಯ ಹಾವು ಕಡಿತಕ್ಕೊಳಗಾಗಿ 5 ಕ್ಕೂ ಹೆಚ್ಚು ಮಂದಿಗೆ ಆಸ್ಪತ್ರೆ ಸೇರಿದ್ದಾರೆ. ಭಾರಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುವಾಗ ಹಾವುಗಳು ತೇಲಿ ಬಂದಿವೆ. ಇದೀಗ ಇವುಗಳು ದಡ ಸೇರಿಕೊಳ್ಳುತ್ತಿದ್ದು, ಮನೆ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ನಿತ್ಯ ಎಲ್ಲೆಂದರಲ್ಲಿ ಹಾವುಗಳನ್ನು ಸ್ಥಳೀಯರು ಭಯಭೀತರಾಗಿದ್ದಾರೆ. ರಾತ್ರಿ ವೇಳೆಗಳಲ್ಲಿ ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಇಲ್ಲಿನ ಸ್ಥಳೀಯರು ಹೇಳುತ್ತಾರೆ.
ಇನ್ನು ಕರಾವಳಿ ಭಾಗದಲ್ಲಿ ಪ್ರತಿ ಮಳೆಗಾಲದಲ್ಲಿಯೂ ಇದೇ ಪರಿಸ್ಥಿತಿ ನಿರ್ಮಾಣವಾಗುತ್ತಿದೆ . ಅದರಲ್ಲಿಯೂ ಅಂಕೋಲಾ ಭಾಗದ ಕೆಲ ಗ್ರಾಮಗಳಲ್ಲಿ ಮಳೆಗಾಲದಲ್ಲಿ ನೆರೆ ಹಾವಳಿ ಜೊತೆಗೆ ಹಾವುಗಳ ಕಾಟದಿಂದಲೂ ಪಾರಾಗಲು ಜನ ಪರದಾಡಬೇಕಾಗಿದೆ. ಇನ್ನು ಈ ಬಗ್ಗೆ ಉರಗ ಪ್ರೇಮಿ ಮಹೇಶ್ ನಾಯ್ಕ ಅವರ ಬಳಿ ಕೇಳಿದ್ರೆ, ಮಳೆಗಾಲದಲ್ಲಿ ನೀರಿನ ರಭಸಕ್ಕೆ ತೇಲಿ ಬರುವ ಹಾವುಗಳು ಎಲ್ಲಿ ಸಾಧ್ಯವೋ ಅಲ್ಲಿ ದಡ ಸೇರಿಕೊಂಡು ಮನೆ ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತವೆ.
ಅಲ್ಲದೇ ಇತ್ತೀಚಿಗೆ ಐಆರ್ಬಿ ಕಂಪನಿಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಇನ್ನಿತರ ಕಾಮಗಾರಿಯಿಂದಾಗಿ ಅವುಗಳ ಬಿಲಗಳು ನಾಶವಾಗಿವೆ. ಈ ಕಾರಣಗಳಿಂದ ಊರುಗಳಲ್ಲಿ ಹಾವುಗಳು ಕಾಣಿಸಿಕೊಳ್ಳುತ್ತಿರುವುದಾಗಿ ಹೇಳಿದ್ದಾರೆ. ವಾರಕ್ಕೆ 4-5 ಹಾವುಗಳನ್ನು ಹಿಡಿಯಲಾಗುತ್ತಿದೆ. ಅದರಲ್ಲಿ ಹೆಚ್ಚು ಹೆಬ್ಬಾವು ಹಾಗೂ ನಾಗರ ಹಾವುಗಳಿದ್ದು ಕಾಳಿಂಗ ಸರ್ಪ ಸೇರಿದಂತೆ ಇತರೆ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡಲಾಗಿದೆ.
ಒಟ್ಟಾರೆ ಮಾನವನ ಸ್ವಯಂಕೃತ ಅಪರಾಧಗಳಿಂದ ಮತ್ತು ಅಭಿವೃದ್ಧಿಯ ಪರಾಕಾಷ್ಟೆಗಳಿಂದಾಗಿ ಪರಿಸರ ನಾಶವಾಗುತ್ತಿದ್ದು, ಇದರಿಂದಾಗಿ ಕಾಡಿನಲ್ಲಿರಬೇಕಾದ ಸರೀಸೃಪಗಳು, ಪ್ರಾಣಿ, ಪಕ್ಷಿಗಳು ತಮ್ಮ ನೆಲೆಯನ್ನು ಕಳೆದುಕೊಂಡು ಊರುಗಳತ್ತ ಮುಖ ಮಾಡಿದ್ದು, ಪ್ರಾಣಿಗಳು ಮತ್ತು ಮಾನವ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.
ಓದಿ : ಬಿಜೆಪಿಯಲ್ಲಿ ಸಿದ್ಧಾಂತ ಇಲ್ಲ, ಗೆಲ್ಲೋದಿದ್ದರೆ ಸೋನಿಯಾ ಗಾಂಧಿಗೂ ಟಿಕೆಟ್ ಕೊಡ್ತಾರೆ: ಮುತಾಲಿಕ್