ಉಡುಪಿ: ಯಕ್ಷಗಾನ ಕಲೆಯ ಸಂಪತ್ತನ್ನು ಪಸರಿಸಲು ಇದೇ ಮೊದಲ ಬಾರಿಗೆ ಉಡುಪಿಯಲ್ಲಿ ರಾಜ್ಯಮಟ್ಟದ "ಸಮಗ್ರ ಯಕ್ಷಗಾನ ಸಮ್ಮೇಳನ" ಹಮ್ಮಿಕೊಂಡಿದ್ದು, ವಿದ್ಯುಕ್ತವಾಗಿ ಉದ್ಘಾಟನೆಗೊಂಡಿದೆ. ಕೇಂದ್ರ ಕೃಷಿ, ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಅವರು ಸಮ್ಮೇಳನ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಉಡುಪಿ ಮತ್ತು ಇಡೀ ಕರಾವಳಿ ಭಾಗದಲ್ಲಿ ಯಕ್ಷಗಾನ ಜೀವಾಳವಾಗಿದೆ. ಈ ಭವ್ಯ ಕಲೆಗೆ ಸದಾ ಬೆಂಬಲವಿದೆ. ಯಕ್ಷಗಾನಕ್ಕೆ ಜನರನ್ನು ಸೆಳೆಯುವ ಶಕ್ತಿ ಇದ್ದು, ಪುರಾಣ, ಜನಪದ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳಲು ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕಲೆಯನ್ನು ಅರಿಯಬೇಕು ಎಂದು ಸಲಹೆ ನೀಡಿದರು.
ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಪೌರಾಣಿಕ ಕಥೆಗಳನ್ನು ತಿಳಿದುಕೊಳ್ಳಲು ರಾಜ್ಯದ ಶಾಲೆಗಳಲ್ಲಿ ಯಕ್ಷಗಾನವನ್ನು ವಿದ್ಯಾರ್ಥಿಗಳಿಗೆ ಕಲಿಸಬೇಕು. ಯಕ್ಷಗಾನ ಎಂಬುದು ಧಾರ್ಮಿಕ ಕಲೆಯಾಗಿಲ್ಲ. ಅದನ್ನು ಆ ದೃಷ್ಟಿಕೋನದಿಂದ ಮಾತ್ರ ನೋಡಬಾರದು. ಶ್ರೀಮಂತ ಕಲಾ ಪರಂಪರೆಯನ್ನು ನಾವು ಉಳಿಸಬೇಕಿದೆ ಎಂದರು.
ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ ವೇಷಧಾರಿಗಳ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಸಾಮಾಜಿಕ ಕಾರ್ಯಕರ್ತ ನಾಡೋಜ ಜಿ ಶಂಕರ್ ಅವರು ಧ್ವಜಾರೋಹಣ ನೆರವೇರಿಸಿದರು.
ಉಡುಪಿ ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮವು ರಾಜ್ಯಮಟ್ಟದ ಮೊದಲ ಯಕ್ಷಗಾನ ಸಮ್ಮೇಳನವಾಗಿದೆ. ಡಾ.ಎಂ. ಪ್ರಭಾಕರ್ ಜೋಶಿ ಅವರು ಸಮ್ಮೇಳನದ ಅಧ್ಯಕ್ಷರಾಗಿದ್ದಾರೆ. ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನಿಲ್ಕುಮಾರ್ ಅವರು ಸಮ್ಮೇಳನದ ನೇತೃತ್ವ ವಹಿಸಿದ್ದಾರೆ. 5 ಜಿಲ್ಲೆಯ ಹಿರಿಯ ಯಕ್ಷಗಾನ ಕಲಾವಿದರು, ವಿಧ್ವಾಂಸರು ಸಮ್ಮೇಳನದಲ್ಲಿ ಭಾಗವಹಿಸಿದ್ದರು.
ಇದೇ ವೇಳೆ ಯಕ್ಷಗಾನ ಗೋಷ್ಠಿ, ಪ್ರದರ್ಶನ, ತಾಳಮದ್ದಲೆ, ಪರಿಕರ ತಯಾರಿಕೆ ಮಳಿಗೆಗಳ ಉದ್ಘಾಟನೆ ನಡೆದಿದ್ದು, ಎರಡು ದಿನ ನಡೆಯಲಿರುವ ಯಕ್ಷಗಾನ ಸಮಗ್ರ ಸಮ್ಮೇಳನದಲ್ಲಿ ವಿವಿಧ ವಿಚಾರಗೋಷ್ಠಿಗಳು ನಡೆಯಲಿವೆ.
ರೋಹಿತ್ ಚಕ್ರತೀರ್ಥ ಆಗಮನಕ್ಕೆ ವಿರೋಧ: ರಾಜ್ಯಮಟ್ಟದ ಯಕ್ಷಗಾನ ಸಮ್ಮೇಳನ ಉದ್ಘಾಟನೆಗೆ ಆಗಮಿಸಿದ ಲೇಖಕ ರೋಹಿತ್ ಚಕ್ರತೀರ್ಥರಿಗೆ ಬಿಲ್ಲವ ಸಮುದಾಯದಿಂದ ತೀವ್ರ ವಿರೋಧ ವ್ಯಕ್ತವಾಯಿತು. ಸಮ್ಮೇಳನ ನಡೆಯುತ್ತಿರುವ ಸ್ಥಳಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಬಿಲ್ಲವ ಮುಖಂಡರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಸ್ಥಳದಲ್ಲಿ ಪೊಲೀಸರಿಂದ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಸಮ್ಮೇಳನದ ಮೈದಾನದಿಂದ 150 ಮೀಟರ್ ದೂರದಲ್ಲಿಯೇ ಪ್ರತಿಭಟನಾಕಾರರನ್ನು ತಡೆಯಲಾಯಿತು. ರೋಹಿತ್ ಚಕ್ರತೀರ್ಥರ ವಿರುದ್ದ ಪ್ರತಿಭಟನಾಕಾರರು ಘೋಷಣೆ ಕೂಗಿದರು.
ನಾರಾಯಣ ಗುರುಗಳಿಗೆ ಅಗೌರವ ತೋರಿರುವ ಚಕ್ರತೀರ್ಥರು, 10ನೇ ತರಗತಿ ಪಠ್ಯಪುಸ್ತಕದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾಠವನ್ನು ಕೈ ಬಿಡಲು ಕಾರಣರಾಗಿದ್ದಾರೆ ಎಂಬುದು ಬಿಲ್ಲವ ಸಮುದಾಯದ ಪ್ರತಿಭಟನೆಗೆ ಕಾರಣವಾಗಿತ್ತು.
ಇದನ್ನೂ ಓದಿ: ಮಂಗಳೂರಲ್ಲಿ ಮೊದಲ ಬಾರಿಗೆ ಮಹಿಳಾ ಕಲಾವಿದರಿಂದ ಸಂಪೂರ್ಣ ಶ್ರೀದೇವಿ ಮಹಾತ್ಮೆ ಯಕ್ಷಗಾನ