ಉಡುಪಿ: ಮಳೆಗಾಲ ಮುಗಿದು ಇದೀಗ ಸಾಲು ಸಾಲು ಹಬ್ಬಗಳು ನಮ್ಮೆದುರು ಬಂದಿದ್ದು, ವಿವಿಧ ಹಬ್ಬಗಳ ಆಚರಣೆಗೆ ಸಿದ್ದವಾಗಿದ್ದೇವೆ. ಆದರೆ ಹಬ್ಬಗಳ ಆಚರಣೆಯ ಹರ್ಷದಲ್ಲಿ ಎಚ್ಚರ ತಪ್ಪಿ ಅಪಾಯ ಆಹ್ವಾನಿಸಬೇಡಿ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ನಾಡಿನ ಜನತೆಗೆ ಕಿವಿಮಾತು ಹೇಳಿದ್ದಾರೆ.
ಸಾಲು-ಸಾಲು ಹಬ್ಬಗಳ ಹಿನ್ನೆಲೆ, ಕೊರೊನಾ ನಿಯಂತ್ರಣಕ್ಕೆ ಸರ್ಕಾರ ವಿಧಿಸಿದ್ದ ನಿರ್ಬಂಧಗಳನ್ನು ಇದೀಗ ಸಡಿಲಿಕೆ ಮಾಡಿದ್ದು, ಪುಣ್ಯಕ್ಷೇತ್ರಗಳ ದರ್ಶನ ಹಾಗೂ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲು ಅವಕಾಶ ಮಾಡಿಕೊಟ್ಟಿದೆ. ಅವಕಾಶ ದೊರೆಯಿತು ಎಂಬ ಮಾತ್ರಕ್ಕೆ ನಾವು ಮೈಮರೆಯುವಂತಿಲ್ಲ. ಸಾಮಾಜಿಕ ಅಂತರ , ಮಾಸ್ಕ್ ಧರಿಸುವುದು ಸೇರಿದಂತೆ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಅವಶ್ಯವಾಗಿ ಪಾಲಿಸಬೇಕು ಎಂದು ವಿನಂತಿಸಿದ್ದಾರೆ.
ಕೊರೊನಾ ಎಂಬ ಮಹಾಮಾರಿಯಿಂದ ದೇಶವನ್ನು ಮುಕ್ತಗೊಳಿಸಲು ನಾವು ಕೆಲವು ಸ್ವಯಂ ನಿರ್ಬಂಧಗಳನ್ನು ಅನುಸರಿಸಿಕೊಂಡು, ಕ್ಷೇತ್ರದರ್ಶನ ಹಾಗೂ ಧಾರ್ಮಿಕ ಕಾರ್ಯಗಳನ್ನು ನಡೆಸಬೇಕು. ಕೊರೊನಾದಿಂದ ಮುಕ್ತಿಗಾಗಿ ಹಾಗೂ ಲೋಕದ ಒಳಿತಿಗಾಗಿ ನಾವೆಲ್ಲರೂ ಸಹ ವಿಶೇಷವಾಗಿ ಪ್ರಾರ್ಥಿಸಬೇಕು. ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡುವುದು ಕೇವಲ ಸರ್ಕಾರದ ಹೊಣೆಯಲ್ಲ, ಎಲ್ಲರ ಕರ್ತವ್ಯ ಎಂದು ಸಂದೇಶ ಸಾರಿದ್ದಾರೆ.