ತುಮಕೂರು : ಸಿಎಂ ಬದಲಾವಣೆಯಿಂದ ಯಾವ ಅಭದ್ರತೆಯೂ ಇಲ್ಲ. ನಾನು ಬಿಜೆಪಿಯ ಒಬ್ಬ ಸದಸ್ಯನಾಗಿ, ಕಾರ್ಯಕರ್ತನಾಗಿ ಇಲ್ಲಿದ್ದೇನೆ. ನನಗೆ ಖಾತೆ ಕೊಟ್ರೂ ಹಿಂಗೇ ಇರ್ತೇನೆ ಕೊಡ್ಲಿಲ್ಲ ಅಂದ್ರು ಹಿಂಗೇ ಇರ್ತೇನೆ ಎಂದು ನೂತನ ಸಚಿವ ಆರ್ ಮುನಿರತ್ನ ತಿಳಿಸಿದ್ದಾರೆ.
ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾನು ಎರಡು ವರ್ಷ ಪಕ್ಷದಲ್ಲಿ ಯಾವ ಅಧಿಕಾರ ಇಲ್ಲದೇ ಇದ್ದೆ, ಪಕ್ಷದ ಕೆಲಸ ಮಾಡಿಕೊಂಡಿದ್ದೆ. ಇದೀಗ ಪಕ್ಷ ನನ್ನನ್ನ ಗುರುತಿಸಿದೆ ಎಂದು ನೂತನ ಸಚಿವ ಮುನಿರತ್ನ ಹೇಳಿದ್ರು. ತಾಳ್ಮೆಯಿಂದ ಇರಬೇಕು. 105 ಶಾಸಕರು ಇಲ್ಲದಿದ್ದರೆ ನಾವು ಮಂತ್ರಿಗಳಾಗುತ್ತಿದ್ದೇವಾ ಎಂದ್ರು.


105 ಇದ್ದದ್ದಕ್ಕೆ ಅಲ್ವಾ ನಾವು ಮಂತ್ರಿಗಳಾಗಿದ್ದು. ದೊಡ್ಡ ದೊಡ್ಡ ಖಾತೆ ಬೇಕು ಅಂತಾ ಯಾಕೆ ಕೇಳೋದು? ಅದು ನನ್ನ ಪ್ರಕಾರ ಅದು ತಪ್ಪು ಎಂದರು. ನನಗೆ ಕೊಟ್ಟಿರುವ ಖಾತೆ ತೃಪ್ತಿ ತಂದಿದೆ. ಪಕ್ಷದಲ್ಲಿ ಕೆಲಸ ಮಾಡಬೇಕು. ಬಂದ ತಕ್ಷಣವೇ ದೊಡ್ಡ ಖಾತೆ ಬೇಕು ಅಂದ್ರೆ ಸರಿ ಕಾಣೋದಿಲ್ಲ.
ಇದು ನನ್ನ ವೈಯಕ್ತಿಕ ಅಭಿಪ್ರಾಯ. ಪಕ್ಷಕ್ಕೆ ಕೆಲಸ ಮಾಡಲಿ, ಆಮೇಲೆ ಖಾತೆ ಕೇಳಲಿ ಎಂದರು. ಏಕಾಏಕಿ ಬಂದು ತ್ಯಾಗ ಮಾಡಿ ಬಂದೀದ್ದೀವಿ ಅಂತಾ ಎಷ್ಟು ದಿನ ಇದ್ದನ್ನೇ ಮಾತಾಡ್ತಿರೋದು. ಪಕ್ಷದಲ್ಲಿ ಒಬ್ಬರಾಗಿ ಪಕ್ಷಕ್ಕೆ ಸೇವೆ ಮಾಡೋದನ್ನ ಕಲೀಬೇಕು ಎಂದರು.
