ತುಮಕೂರು: ನಾವು ದೇಶವನ್ನು ಪ್ರೀತಿಸುತ್ತೇವೆ ಎಂದು ಹೇಳುವುದಷ್ಟೇ ಅಲ್ಲ, ಅದನ್ನು ಮಾಡಿ ತೋರಿಸಬೇಕು. ದೇಶದ ರಕ್ಷಣೆಗಾಗಿ ಪ್ರಾಣ ನೀಡಲು ಸದಾ ಸಿದ್ಧರಿರಬೇಕು ಎಂದು ನಿವೃತ್ತ ಸೇನಾನಿ ಪಂಚಾಕ್ಷರಯ್ಯ ಕರೆ ನೀಡಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಡೆದ ಕಾರ್ಗಿಲ್ ವಿಜಯ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪ್ರತಿಯೊಬ್ಬ ಸೈನಿಕರ ಜೀವನವು ವಿರೋಚಿತವಾಗಿರುತ್ತದೆ. ಪ್ರತಿಕ್ಷಣ ಸಾವು-ಬದುಕಿನ ನಡುವೆಯೂ ದೇಶಕ್ಕಾಗಿ ಹೋರಾಡುತ್ತಾರೆ. ಯುವಕರು ದೇಶದ ಬಗ್ಗೆ ತಮಗಿರುವ ಪ್ರೇಮವನ್ನು ವಿಶ್ವಕ್ಕೆ ತೋರಿಸಬೇಕು ಎಂದು ನುಡಿದರು.
ಉಪನ್ಯಾಸಕ ರಾಜೇಶ್ ಮಾತನಾಡಿ, ಆಗಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರ ಆದೇಶದ ಮೇರೆಗೆ ಆಪರೇಷನ್ ವಿಜಯ್ ಎಂಬ ಹೆಸರಿನಲ್ಲಿ ಯುದ್ಧವನ್ನು ಘೋಷಿಸಲಾಯಿತು. ಆ ಯುದ್ಧವೇ ಕಾರ್ಗಿಲ್ ಯುದ್ಧ. ಸೈನಿಕರು ಯುದ್ಧವನ್ನು ವೃತ್ತಿ ಎಂದು ಪರಿಗಣಿಸದೆ, ದೇಶಭಕ್ತಿಯ ಕೆಲಸವೆಂದು ಪರಿಗಣಿಸಿ, ಬಲಿದಾನ ಮಾಡುವ ಮೂಲಕ ಭಾರತಕ್ಕೆ ಜಯ ತಂದುಕೊಟ್ಟರು ಎಂದು ನೆನಪಿಸಿಕೊಂಡರು.