ತುಮಕೂರು: ಲಾಕ್ಡೌನ್ ಸಂದರ್ಭದಲ್ಲಿ ರಾಜ್ಯದಲ್ಲಿ ಹಲವು ಕ್ಷೇತ್ರಗಳಲ್ಲಿ ವಿನಾಯಿತಿ ನೀಡಿದೆ. ಅದ್ರಲ್ಲೂ ನೀರಾವರಿ ಯೋಜನೆಗಳನ್ನು ಆರಂಭಿಸಲು ಹಸಿರು ನಿಶಾನೆ ತೋರಿದೆ. ಆದ್ರೆ ವ್ಯವಸ್ಥೆಯಲ್ಲಿನ ಅವ್ಯವಸ್ಥೆಯಿಂದ ಜಿಲ್ಲೆಯಲ್ಲಿ ಮಹತ್ವದ ನೀರಾವರಿ ಕಾಮಗಾರಿ ಇದುವರೆಗೂ ಆರಂಭವಾಗಿಲ್ಲ.
ಜಿಲ್ಲೆಯಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕಾಮಗಾರಿ ಲಾಕ್ಡೌನ್ ಹಿನ್ನೆಲೆ ಸ್ಥಗಿತಗೊಂಡು ಒಂದು ತಿಂಗಳು ಕಳೆದಿದೆ. ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನಲ್ಲಿ ಆರಂಭವಾಗಿರೋ ಕಾಮಗಾರಿ ಶರವೇಗದಲ್ಲಿ ಸಾಗಿತ್ತು. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಮೂಲ್ಕ ಚಿಕ್ಕಬಳ್ಳಾಪುರದ ಕಡೆಗೆ ಪೈಪ್ ಲೈನ್ ಕಾಮಗಾರಿ ನಡೆದಿತ್ತು. ಆದ್ರೆ ಲಾಕ್ಡೌನ್ನಿಂದ ಕಾಮಗಾರಿ ಸ್ಥಗಿತಗೊಂಡಿದೆ. ಇತ್ತೀಚೆಗೆ ರಾಜ್ಯ ಸರ್ಕಾರ ನೀರಾವರಿ ಯೋಜನೆ ಕಾಮಗಾರಿಗಳನ್ನು ಆರಂಭಿಸಬಹುದೆಂದು ಹೇಳಿದೆ. ಆದ್ರೆ ಎತ್ತಿನ ಹೊಳೆ ಕಾಮಗಾರಿ ಮಾತ್ರ ಇದುವರೆಗೂ ಆರಂಭವಾಗಿಲ್ಲ.
ಇನ್ನು ಕಾಮಗಾರಿ ಸಮೀಪದಲ್ಲೇ 20ಕ್ಕೂ ಹೆಚ್ಚು ಹೊರ ರಾಜ್ಯದ ಕಾರ್ಮಿಕರಿದ್ದಾರೆ. ಅವರು ಕೂಡ ಕೆಲಸಕ್ಕೆ ಬರುತ್ತಿಲ್ಲ. ಗುತ್ತಿಗೆದಾರರು ತಮಗೆ ಒಂದು ತಿಂಗಳಿನಿಂದ ವೇತನ ನೀಡಿಲ್ಲ. ಹೀಗಾಗಿ ನಮ್ಮ ಬಳಿ ಹಣವಿಲ್ಲದಂತಾಗಿದೆ. ನಮ್ಮ ಕುಟುಂಬಕ್ಕೆ ಕಳುಹಿಸಲು ಹಣ ಇಲ್ಲದಂತಾಗಿದೆ ಎಂದು ಕಾರ್ಮಿಕರು ದೂರಿದ್ದಾರೆ.