ತುಮಕೂರು : ಶಿವಮೊಗ್ಗದಲ್ಲಿ ಹರ್ಷನ ಕೊಲೆ ನಡೆದ ಘಟನಾ ವ್ಯಾಪ್ತಿಯಲ್ಲಿ ಎರಡು ಪೊಲೀಸ್ ಠಾಣೆಗಳಿದ್ದು, ಆ ಠಾಣೆಗಳಲ್ಲಿ ಆರೋಪಿಗಳ ಮೇಲೆ ಹಿಂದೆ ಕನಿಷ್ಠ ಎರಡು ಪ್ರಕರಣಗಳು ದಾಖಲಾಗಿವೆ. ಈ ಆರೋಪಿಗಳನ್ನು ಇಷ್ಟರಮಟ್ಟಿಗೆ ಬೆಳೆಯಲು ಪೊಲೀಸರು ಏಕೆ ಅವಕಾಶ ಕೊಟ್ಟರು ಎನ್ನುವುದನ್ನ ಸಮಗ್ರವಾಗಿ ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೊಲೀಸರಿರಬಹುದು, ಸಾಮಾನ್ಯ ಜನರಿರಬಹುದು ಅಥವಾ ನಾನೇ ಇರಬಹುದು ಯಾರೇ ತಪ್ಪು ಮಾಡಿದರೂ ಎಲ್ಲರಿಗೂ ಒಂದೇ ರೀತಿಯ ಕಾನೂನು ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಘಟನೆ ಕುರಿತಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತನಿಖೆ ನಡೆಸುವಂತೆ ಸೂಚಿಸಿದ್ದು, ಪೊಲೀಸರ ವಿರುದ್ಧ ತನಿಖೆ ನಡೆಯಲಿದ್ದು, ಒಂದು ವಾರದಲ್ಲಿ ವರದಿ ಲಭಿಸಲಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಾರೆಯೇ, ಕಾಂಗ್ರೆಸ್ನವರ ಹೇಳಿಕೆಗಳು ಅಸಂಬದ್ಧವಾಗಿವೆ. ಶಿವಮೊಗ್ಗದಲ್ಲಿ ಮೃತಪಟ್ಟ ಹರ್ಷ ಅವರ ತಾಯಿ ನನ್ನ ಬಳಿ ಮಾತನಾಡಿದ್ದು, ಅವರು ತಮ್ಮ ಮಗನ ಸಾವು ಅರ್ಥಹೀನ ಆಗಬಾರದು. ಅವನು ಒಂದು ಉದ್ದೇಶಕ್ಕೋಸ್ಕರ ಮೃತಪಟ್ಟಿದ್ದಾನೆ. ಅದಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಹೇಳಿದ್ದಾರೆ. ಅದರಂತೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಹೇಳಿದರು.
ಇದೇ ವೇಳೆ ಉಕ್ರೇನ್ ನಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವಂತಹ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಸಚಿವರು ಹೇಳಿದರು.