ತುಮಕೂರು : ವಾಹನ ತಪಾಸಣೆ ವೇಳೆ ಎಎಸ್ಐಗೆ ಬೈಕ್ ಸವಾರನೊಬ್ಬ ಗುದ್ದಿದ ಪರಿಣಾಮ ಎಎಸ್ಐ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಬೆಳ್ಳಾವಿ ಬಳಿಯ ಚನ್ನೇನಹಳ್ಳಿ ಗೇಟ್ ಬಳಿ ನಡೆದಿದೆ. ಬೆಳ್ಳಾವಿ ಪೊಲೀಸ್ ಠಾಣೆಯ ಎಎಸ್ ಐ ನಂಜೇಗೌಡ ಗಂಭೀರವಾಗಿ ಗಾಯಗೊಂಡವರಾಗಿದ್ದಾರೆ.
ಬೆಳ್ಳಾವಿ ಬಳಿಯ ಚನ್ನೇನಹಳ್ಳಿ ಗೇಟ್ ಬಳಿ ಎಎಸ್ಐ ನಂಜೇಗೌಡ ಹಾಗೂ ಸಿಬ್ಬಂದಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಬೈಕ್ ಸವಾರನೊಬ್ಬ ಗಾಬರಿಗೊಂಡು ಡಿಕ್ಕಿ ಹೊಡೆದಿದ್ದಾನೆ. ಎಎಸ್ಐ ನಂಜೇಗೌಡ ಹಾಗೂ ಬೈಕ್ ಸವಾರ ಇಬ್ಬರು ಕೂಡ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಎಎಸ್ಐ ಅವರಿಗೆ ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.