ಶಿವಮೊಗ್ಗ: ಸರಿಯಾದ ಸಮಯಕ್ಕೆ ಬಸ್ ಸೌಲಭ್ಯವಿಲ್ಲದೆ ತರಗತಿಗಳಿಗೆ ಗೈರಾಗುವಂತಹ ಪರಿಸ್ಥಿತಿ ಸಾಗರದ ಚೂರಿಕಟ್ಟೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನಿರ್ಮಾಣವಾಗಿದೆ.
ಜಿಲ್ಲೆಯ ಸಾಗರ ತಾಲೂಕಿನ ಚೂರಿಕಟ್ಟೆ ಗ್ರಾಮದಲ್ಲಿ ಸುಮಾರು 200ಕ್ಕೂ ಅಧಿಕ ವಿದ್ಯಾರ್ಥಿಗಳು ಸಾಗರದ ವಿವಿಧ ಕಾಲೇಜುಗಳಿಗೆ ವಿದ್ಯಾಭ್ಯಾಸಕ್ಕೆಂದು ಹೋಗುತ್ತಾರೆ. ಆದರೆ ಇವರೆಲ್ಲರಿಗೂ ಸೂಕ್ತ ಬಸ್ ಸೌಲಭ್ಯವಿಲ್ಲದೆ ತರಗತಿಗಳಿಗೆ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ.
ವಿದ್ಯಾರ್ಥಿಗಳೆಲ್ಲ ಬೆಳ್ಳಂಬೆಳಗ್ಗೆ ತಮ್ಮ ತಮ್ಮ ಹಳ್ಳಿಯಿಂದ ನಾಲ್ಕೈದು ಕಿ.ಮೀ ದೂರು ನಡೆದು ಚೂರಿಕಟ್ಟೆಗೆ ಬಂದು ಬಸ್ಗಾಗಿ ಕಾಯುತ್ತ ನಿಲ್ಲುತ್ತಾರೆ. ಆದರೆ ಇಲ್ಲಿ ಸಂಚರಿಸುವ ಬಸ್ಗಳು ನಿಲ್ಲಿಸದೆ ಹಾಗೆ ಹೋಗುತ್ತಿವೆ. ಇದರಿಂದ ಕಾಲೇಜಿಗೆ ಸಮಯಕ್ಕೆ ಸರಿಯಾಗಿ ಹೋಗಲು ಆಗದೆ ಪಾಠಗಳಿಂದ ವಂಚಿತರಾಗುತ್ತಿದ್ದಾರೆ. ತಮಗೆ ಬಸ್ ಸೌಲಭ್ಯ ಕಲ್ಪಿಸಬೇಕೆಂದು ವಿದ್ಯಾರ್ಥಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.