ಶಿವಮೊಗ್ಗ: ಹಿಜಾಬ್ ಹಾಗೂ ಕೇಸರಿ ಶಾಲು ವಿವಾದದ ಕುರಿತು ಕೋರ್ಟ್ ನೀಡಿರುವ ತೀರ್ಪುನ್ನು ಸ್ವಾಗತಿಸುವುದಾಗಿ ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ. ಹಿಜಾಬ್ ಬಗ್ಗ ಹೈಕೋರ್ಟ್ ನ್ಯಾಯಾಧೀಶರು ತೆಗೆದು ಕೊಂಡ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಎಲ್ಲ ಶಿಕ್ಷಣ ಸಂಸ್ಥೆಗಳು ಇದನ್ನು ಗಮನಿಸಬೇಕು.
ಸಮವಸ್ತ್ರ ಏನಿದೆ ಅದನ್ನೆ ಹಾಕಿ ಕೊಂಡು ಬರಬೇಕು, ಕೇಸರಿ ಶಾಲು ಹಾಗೂ ಹಿಜಾಬ್ ಯಾವುದನ್ನು ಧರಿಸಿಕೊಂಡು ವಿದ್ಯಾ ಸಂಸ್ಥೆಗೆ ಬರಬಾರದು ಅಂತ ಕೋರ್ಟ್ ಹೇಳಿದೆ. ಇದನ್ನು ಯಾರು ಉಲ್ಲಂಘಿಸಿದರೂ ನ್ಯಾಯಾಂಗ ನಿಂದನೆ ಆಗುತ್ತದೆ. ಇದರ ವಿರುದ್ಧ ಕ್ರಮ ತೆಗೆದು ಕೈಗೊಳ್ಳುತ್ತೇವೆ ಎಂದರು.
ಕೋರ್ಟ್ ಈ ವಿಚಾರದಲ್ಲಿ ಗಮನ ಹರಿಸಿದೆ. ಇಡಿ ದೇಶ, ಪ್ರಪಂಚ ಇವತ್ತು ಕರ್ನಾಟಕವನ್ನು ನೋಡುವಂತಹ ಪರಿಸ್ಥಿತಿ ಇದೆ. ಆದಷ್ಟು ಬೇಗ ಈ ಪ್ರಕರಣಕ್ಕೆ ಮಂಗಳ ಹಾಡಲಿ ಅಂತಾ ಸಂಬಂಧಪಟ್ಟ ನ್ಯಾಯಾಧೀಶರಲ್ಲಿ ಪ್ರಾರ್ಥನೆ ಮಾಡುತ್ತೇನೆ. ಕರ್ನಾಟಕ ರಾಜ್ಯದಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲ ಧರ್ಮದವರು ಅಣ್ಣ - ತಮ್ಮಂದಿರ ರೀತಿ ಇದ್ದಾರೆ. ಈ ರಾಜ್ಯದಲ್ಲಿ ಆಕಸ್ಮಿಕವಾಗಿ ನಡೆದ ಘಟನೆ ಇದಾಗಿದೆ ಎಂದು ವಿಷಾದ ವ್ಯಕ್ತಪಡಿಸಿದರು.
96 ಮುಸ್ಲಿಂ ವಿದ್ಯಾರ್ಥಿಗಳಿರುವ ವಿದ್ಯಾ ಸಂಸ್ಥೆಯಲ್ಲಿ 90 ಮುಸ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಹೋಗುತ್ತಾರೆ. ಉಳಿದ 6 ವಿದ್ಯಾರ್ಥಿಗಳಿಗೆ ಸಂಬಂಧಪಟ್ಟ ವ್ಯಕ್ತಿಗಳು, ಪ್ರಚೋದನೆ ಮಾಡಿದ ವ್ಯಕ್ತಿಗಳು ಸಮಾಧಾನ ಮಾಡಿದ್ದರೆ, ಇಡಿ ದೇಶ ಮತ್ತು ಪ್ರಪಂಚದಲ್ಲಿ ಸುದ್ದಿ ಆಗುತ್ತಿರಲಿಲ್ಲ ಎಂದರು.
ಇದಕ್ಕೆ ಕಾರಣ 6 ಜನ ವಿದ್ಯಾರ್ಥಿನಿಯರು ಮಾತ್ರ. ಅವರ ಹಿಂದೆ ಹಲವು ಸಂಸ್ಥೆಗಳು ಕುತಂತ್ರ ಮಾಡುತ್ತಿವೆ. ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರ ಪೋಷಕರು ಇದರ ಬಗ್ಗೆ ಗಮನ ಹರಿಸಬೇಕು. ಶಿಕ್ಷಣ ಸಂಸ್ಥೆಗಳು ಇದನ್ನು ಗಮನಿಸಿ, ಕೋರ್ಟ್ ತನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ಪರಿಪಾಲನೆ ಮಾಡಬೇಕು ಎಂದರು.
ಈ ರೀತಿಯ ಗೊಂದಲ ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ನಡೆದಿತ್ತು. ಆ ಸಂದರ್ಭದಲ್ಲಿ ತಾನು ಸಿಎಂ ಆಗಿದ್ದೆ ಅನ್ನೋದನ್ನು ಮರೆಯಬಾರದು. ಇನ್ನೂಬ್ಬರ ಮೇಲೆ ಕಲ್ಲು ಹೊಡೆಯುವುದನ್ನು ಕುಮಾರಸ್ವಾಮಿ ಬಿಡಬೇಕು ಎಂದರು.
ಸರ್ಕಾರ ಏನು ಬೇಕು ಅಂತಾನೇ ಮಾಡಿದೆಯೇ. ಇಂತಹ ಘಟನೆ ಆಗದಂತೆ ತಡೆಯಲು ಸರ್ಕಾರ ಎಲ್ಲಾ ಪ್ರಯತ್ನ ಮಾಡಿದೆ. ಆದರೆ, ಕೆಲವು ಕುತಂತ್ರಿಗಳು ಬೆಂಕಿ ಹಚ್ಚುವಂತಹ ಪ್ರಯತ್ನ ನಡೆಸಿದರು. ಅಂತಹವರಿಗೆ ಇದೊಂದು ಪಾಠ. ಕೋರ್ಟ್ ಆದೇಶ ಬೆಂಕಿ ಹಚ್ಚುವಂತಹವರಿಗೆ ಕಪಾಳ ಮೋಕ್ಷ ಮಾಡಿದೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಿಂದ ಯಾಕೆ ಸ್ಪರ್ಧೆ ಮಾಡುತ್ತೇನೆ ಅಂತ ಏಕೆ ಹೇಳಿದ್ದಾರೆ ಅದು ನನಗೆ ಗೊತ್ತಿಲ್ಲ. ಕುಮಾರಸ್ವಾಮಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಅಂದಿದ್ದು ವಿಶೇಷ ಅಲ್ಲ, ಸಿದ್ದರಾಮಯ್ಯ ತಾನು ಎಲ್ಲಿಂದ ನಿಲ್ಲುತ್ತೇನೆ ಅಂತಾ ಸ್ಪಷ್ಟಪಡಿಸಲಿ ಎಂದರು.
ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಅಲ್ಲ ಅವರು ಎಲ್ಲೇ ಸ್ಪರ್ಧೆ ಮಾಡಿದರು ಸಹ ಅವರಿಗೆ ಹಿನ್ನಡೆಯೇ. ಸಿದ್ದರಾಮಯ್ಯ ತಮ್ಮ ಮಾರ್ಯಾದೆ ಉಳಿಸಿಕೊಳ್ಳಲು ನನಗೆ 224 ಕ್ಷೇತ್ರದಲ್ಲಿ ಕರೆಯುತ್ತಿದ್ದಾರೆ ಎನ್ನುತ್ತಿದ್ದಾರೆ. ತನ್ನ ಕ್ಷೇತ್ರ ಉಳಿಸಿಕೊಳ್ಳಲು ಆಗಲಿಲ್ಲ. ಮಾರ್ಯಾದೆ ಉಳಿಸಿಕೊಳ್ಳಲು ಅವರು ಕರೆಯುತ್ತಿದ್ದಾರೆ, ಇವರು ಕರೆಯುತ್ತಿದ್ದಾರೆ ಎನ್ನುತ್ತಿದ್ದಾರಷ್ಟೇ ಎಂದು ಕುಟುಕಿದರು.