ಶಿವಮೊಗ್ಗ: ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಸ್ಥಾಪಿಸಿದ್ದ ಮೈಸೂರು ಕಾಗದ ಕಾರ್ಖಾನೆ ಮುಚ್ಚದೆ ಉಳಿಸಿ ಪುನಾರಂಭಿಸುವ ಕಾರ್ಯವನ್ನು ರಾಜ್ಯ ಸರ್ಕಾರ ಮಾಡಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಇಂದು ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ಭೇಟಿ ನೀಡಿ ಮಾತನಾಡಿದ ಅವರು, ಕಾರ್ಖಾನೆ ಪುನಾರಂಭಿಸಿ ಕಾರ್ಮಿಕರಿಗೆ ಉದ್ಯೋಗ ನೀಡುವ ಅವಶ್ಯಕತೆ ಇದೆ. ಸಿಎಂ ಯಡಿಯೂರಪ್ಪ ಎಂಪಿಎಂ ವಶದಲ್ಲಿದ್ದ 70 ಸಾವಿರ ಹೆಕ್ಟೇರ್ ಅರಣ್ಯ ಭೂಮಿ ವಾಪಸ್ ಅರಣ್ಯ ಇಲಾಖೆಗೆ ನೀಡದೆ ಕಾರ್ಖಾನೆಗೆ ಗುತ್ತಿಗೆ ಮುಂದುವರೆಸಲು ನಿರ್ಧರಿಸಿದ್ದಾರೆ. ಇದು ಕಾರ್ಖಾನೆ ಪುನಾರಂಭಿಸುವ ಮೊದಲ ಹೆಜ್ಜೆಯಾಗಿದೆ ಎಂದರು.
ನಂತರ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ, ಕಾರ್ಖಾನೆ ಪುನಾರಂಭಕ್ಕೆ ಸರ್ಕಾರದಿಂದ ಸರ್ವ ಪ್ರಯತ್ನ ನಡೆಸಲಾಗುತ್ತಿದೆ. ಮೊದಲನೇಯದಾಗಿ ಕಾರ್ಖಾನೆ ಪುನರಾಂಭಿಸುವುದು, ಎರಡನೇಯದು ಕಾರ್ಖಾನೆಯ ಕಾರ್ಮಿಕರನ್ನು ಉಳಿಸುವುದು ಹಾಗೂ ಮೂರನೇಯದಾಗಿ ಕಾರ್ಖಾನೆಗೆ ಸಂಬಂಧಿಸಿದ ಭೂಮಿಯ ವಿಷಯ. ಇವುಗಳ ಕುರಿತು ಸಚಿವ ಜಗದೀಶ್ ಶೆಟ್ಟರ್ಗೆ ಮನವರಿಕೆ ಮಾಡಲಾಗಿದೆ ಎಂದರು. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ಮಾತನಾಡಿ, ಕಾರ್ಖಾನೆಯನ್ನು ಸರ್ಕಾರ ಅಥವಾ ಖಾಸಗಿಯವರು ಯಾರಾದರೂ ಸಹ ಪ್ರಾರಂಭಿಸಲಿ. ನಮಗೆ ಕಾರ್ಖಾನೆ ಪ್ರಾರಂಭವಾಗಬೇಕು ಎಂದರು.