ಶಿವಮೊಗ್ಗ: ಹಾವುಗಳನ್ನು ಹಿಡಿಯಲು ಉರಗ ತಜ್ಞರು ಹಾವು ಇರುವ ಕಡೆ ಹೋಗುವುದು ಸಾಮಾನ್ಯ. ಆದ್ರೆ, ಪಶ್ಚಿಮ ಘಟ್ಟದಲ್ಲಿ ಅಪರೂಪದ ವಿಷಕಾರಿ ಹಾವೊಂದು ಉರಗ ತಜ್ಞರನ್ನೆ ಅರಸಿ ಬಂದಿದೆ.
ಜಿಲ್ಲೆಯ ನಗರ ಗ್ರಾಮದ ಉರಗ ತಜ್ಞ ನಾರಾಯಣ ಕಾಮತ್ರವರ ಮನೆ ಆವರಣದಲ್ಲಿ ಅಪರೂಪದ ಹಾವೊಂದು ಕಾಣಿಸಿಕೊಂಡಿದೆ. ಇದನ್ನು ನೋಡಿದ ಕಾಮತ್ರವರ ಪತ್ನಿ ತೃಪ್ತಿ ಕಾಮತ್ ಪತಿಗೆ ತಿಳಿಸಿದ್ದಾರೆ. ಇದನ್ನು ಗಮನಿಸಿದ ನಾರಾಯಣ ಕಾಮತ್ ಹಾವನ್ನು ಸೇಫಾಗಿ ಹಿಡಿಯುವಲ್ಲಿ ಯಶಸ್ವಿ ಕೂಡ ಆಗಿದ್ದಾರೆ.
ಇದು ಬಹು ಅಪರೂಪದ ಕೋರಲ್ ಸ್ನೇಕ್:
ಇದು ಕೋರಲ್ ಸ್ನೇಕ್, ಹವಳದ ಹಾವು ಎಂದು ಗುರುತಿಸಿಕೊಂಡಿದೆ. ಮಲೆನಾಡಲ್ಲಿ ಇದನ್ನು ಹಪ್ಪಟೆ ಹಾವು ಎಂದು ಕರೆಯುತ್ತಾರೆ. ಇದು ಅತ್ಯಂತ ವಿಷಕಾರಿಯಾಗಿದೆ. ಆದರೆ ಈ ಹಾವು ಕಚ್ಚಿ ಸತ್ತವರ ಪ್ರಕರಣ ಕಡಿಮೆಯಾಗಿದೆ. ಇದರ ಹಲ್ಲುಗಳು ಮುಂಭಾಗದಲ್ಲಿ ತುಸು ಹೆಚ್ಚು ಬಾಗಿರುವ ಕಾರಣ ಇದು ಕಚ್ಚುವ ಸಂದರ್ಭದಲ್ಲಿ ವಿಷ ಸೇರುವುದು ಕಡಿಮೆ. ಪಶ್ಚಿಮಘಟ್ಟದಲ್ಲಿ ಈ ಹಾವು ಕಂಡುಬರುತ್ತವೆ. ವಿಶೇಷವೆಂದರೆ ಹಾವು ಎರಡು ಬಣ್ಣಗಳಿಂದ ಕೂಡಿದ್ದು, ಮೇಲ್ಬಾಗ ಕಪ್ಪು ಬಣ್ಣವಾಗಿಯೂ, ಕೆಳಭಾಗ ಕೆಂಪುಬಣ್ಣದಲ್ಲಿದ್ದು ಗಮನಸೆಳೆಯುತ್ತವೆ.