ಶಿವಮೊಗ್ಗ: ಮಂಗನ ಕಾಯಿಲೆಯು ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸಕ್ತ ವರ್ಷ 14 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು. ಮಂಗನ ಕಾಯಿಲೆಯ ಸಾವು ನೋವು, ರೋಗ ಪತ್ತೆ ಹಾಗೂ ಸುಲಭವಾಗಿ ಚಿಕಿತ್ಸೆ ನೀಡಲು ಶಿವಮೊಗ್ಗ ಸೇರಿದಂತೆ ಕೆಎಫ್ಡಿ ರೋಗ ಕಾಣಿಸಿಕೊಳ್ಳುವ ಆರು ಜಿಲ್ಲೆಗಳ ವೈರಲ್ ಡೈಗ್ನಾಸ್ಟೊಟಿಕ್ ಲ್ಯಾರ್ಬೊರೇಟರಿ ಸಿಬ್ಬಂದಿಗೆ ಮೂರು ದಿನಗಳ ತರಬೇತಿಯನ್ನು ನಡೆಸಲಾಗುತ್ತಿದೆ. ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಬೆಳಗಾವಿ ಜಿಲ್ಲೆಯ ಸಿಬ್ಬಂದಿ ತರಬೇತಿ ಕಾರ್ಯದಲ್ಲಿ ಭಾಗವಹಿಸುತ್ತಿದ್ದಾರೆ.
ಶಿವಮೊಗ್ಗ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳ ಕಟ್ಟಡದ ಸಭಾಂಗಣದಲ್ಲಿ ತರಬೇತಿ ಹಾಗೂ ಕಾರ್ಯಾಗಾರ ನಡೆಸಲಾಗುತ್ತಿದೆ. ತರಬೇತಿಯಲ್ಲಿ ಆರು ಜಿಲ್ಲೆಗಳ ಡಿಹೆಚ್ಒಗಳು, ಸರ್ವೇಕ್ಷಣಾಧಿಕಾರಿಗಳು, ಮಲೇರಿಯಾ ಅಧಿಕಾರಿಗಳು ಹಾಗೂ ಅವರ ಕಣ್ಗಾವಲು ತಂಡಗಳು ಭಾಗವಹಿಸಿವೆ. ಮೊದಲನೇ ದಿನ ರೋಗದ ಬಗ್ಗೆ ಯಾವ ರೀತಿಯ ಮಾಹಿತಿ ಪಡೆಯುವುದು, ಎರಡನೇ ದಿನ ಕ್ಷೇತ್ರ ಭೇಟಿ ಮಾಡಿಸಲಾಗಿದೆ. ಕೆಎಫ್ಡಿ ಹೆಚ್ಚು ಕಾಣಿಸಿಕೊಂಡಿದ್ದ ಅರಳಗೋಡು ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿ ರೋಗದ ಉಣ್ಣೆಯನ್ನು ಹೇಗೆ ಪತ್ತೆ ಹಚ್ಚುವುದು ಹಾಗೂ ಅದರ ಸಂಗ್ರಹ ಹಾಗೂ ಉಣ್ಣೆಯನ್ನು ಹೇಗೆ ಪರೀಕ್ಷೆಗಾಗಿ ಸುರಕ್ಷತೆಯಿಂದ ಕಳುಹಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.
ಇನ್ನೂ ಮೂರನೇ ದಿನ ರೋಗವನ್ನು ಯಾವ ರೀತಿ ಹತೋಟಿಗೆ ತರಬೇಕು, ಸಾವು ನೋವು ತಡೆಯುವ ಕುರಿತು ತರಬೇತಿಗೆ ಬಂದವರೂಂದಿಗೆ ಮಾತುಕತೆ ನಡೆಸಲಾಗುತ್ತಿದೆ ಎನ್ನುತ್ತಾರೆ ಶಿವಮೊಗ್ಗ ಡಿಹೆಚ್ಓ ಡಾ. ರಾಜೇಶ್ ಸೂರಗಿಹಳ್ಳಿ.
ಮೂರು ದಿನದ ತರಬೇತಿಯಲ್ಲಿ ಆರೋಗ್ಯ ಇಲಾಖೆಯ ಸಹಾಯಕ ನಿರ್ದೇಶಕರುಗಳು, ಡೆಪ್ಯೂಟಿ ಡೈರೆಕ್ಟರ್ ಡಾ.ಸಂದೀಪ್, ವಿಶ್ವ ಆರೋಗ್ಯ ಸಂಸ್ಥೆಯ ಸರ್ವೆಕ್ಷಣಾಧಿಕಾರಿ ಡಾ. ಸತೀಶ್ ಚಂದ್ರರವರು ಕೂಡ ಭಾಗವಹಿಸಿದ್ದರು.