ಶಿವಮೊಗ್ಗ: ನವವಧುವೊಬ್ಬರು ಮದುವೆ ಉಡುಪಿನಲ್ಲೇ ಪರೀಕ್ಷೆ ಬರೆದಿದ್ದು, ಮದುಮಗನೇ ವಧುವನ್ನು ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನಗರದ ಭರ್ಮಪ್ಪ ನಗರದ ನಿವಾಸಿ ಸತ್ಯವತಿ ಎಂಬ ಯುವತಿ ಮದುವೆ ಮನೆಯಿಂದ ನೇರವಾಗಿ ಕಾಲೇಜಿಗೆ ಆಗಮಿಸಿ ಪರೀಕ್ಷೆ ಬರೆದಿದ್ದಾರೆ.
ಸತ್ಯವತಿಯು ನಗರದ ಕಮಲಾ ನೆಹರು ಕಾಲೇಜಿನಲ್ಲಿ ಅಂತಿಮ ವರ್ಷ ಬಿಎ ಓದುತ್ತಿದ್ದಾರೆ. ಸತ್ಯವತಿ ಕಳೆದ ಎರಡು ವರ್ಷಗಳಿಂದ ತಮಿಳುನಾಡು ಚೆನ್ನೈ ಮೂಲದ ಪ್ರಾನ್ಸಿಸ್ ಎಂಬವರನ್ನು ಪ್ರೀತಿಸುತ್ತಿದ್ದರು. ಪ್ರಾನ್ಸಿಸ್ ಚೆನ್ನೈನಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ಫ್ರಾನ್ಸಿಸ್ ಮತ್ತು ಸತ್ಯವತಿ ಸಾಮಾಜಿಕ ಜಾಲತಾಣದ ಮೂಲಕ ಪರಿಚಯವಾಗಿದ್ದರು. ಬಳಿಕ ಇವರ ಪರಿಚಯ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರು ತಮ್ಮ ಕುಟುಂಬಸ್ಥರಲ್ಲಿ ತಮ್ಮ ಪ್ರೀತಿಯ ಬಗ್ಗೆ ತಿಳಿಸಿದ್ದರು. ಅಷ್ಟೇ ಅಲ್ಲದೆ ಎರಡು ಕುಟುಂಬಸ್ಥರನ್ನು ಮದುವೆಗೆ ಒಪ್ಪಿಸಿದ್ದಾರೆ. ಇಂದು ಮನೆಯಲ್ಲಿಯೇ ಎರಡು ಕುಟುಂಬಗಳ ಸಮ್ಮುಖದಲ್ಲಿ ಸತ್ಯವತಿ ಮತ್ತು ಪ್ರಾನ್ಸಿಸ್ ಮದುವೆ ನಡೆದಿದೆ.
ಅಲ್ಲದೆ ಇಂದು ಸತ್ಯವತಿಗೆ ಅರ್ಥಶಾಸ್ತ್ರ ಪರೀಕ್ಷೆಯೂ ಇತ್ತು. ಈ ಸಂಬಂಧ ಇಂದು ಬೆಳಗ್ಗೆ ಮನೆಯಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾದ ಬಳಿಕ, ಪ್ರಾನ್ಸಿಸ್ ತನ್ನ ಪತ್ನಿ ಸತ್ಯವತಿಯನ್ನು ಬೈಕ್ನಲ್ಲಿ ಕರೆದುಕೊಂಡು ಬಂದು ಕಮಲಾ ನೆಹರು ಕಾಲೇಜಿನಲ್ಲಿ ಪರೀಕ್ಷೆ ಬರೆಯಲು ಬಿಟ್ಟು ಹೋಗಿದ್ದರು. ಸತ್ಯವತಿ ಮದುವೆ ಉಡುಪಿನಲ್ಲಿಯೇ ಪರೀಕ್ಷೆ ಬರೆದಿದ್ದಾರೆ.
ಇದನ್ನೂ ಓದಿ : ನವ ವಧು-ವರರಿಂದ ಮದುವೆ ಮಂಟಪದಲ್ಲೇ ಮತದಾನ ಜಾಗೃತಿ