ಶಿವಮೊಗ್ಗ: ಪಾಲಿಕೆ ಮೇಯರ್-ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಎರಡು ಸ್ಥಾನಗಳೂ ಕೂಡ ಅಂದುಕೊಂಡಂತೆ ಬಿಜೆಪಿಯ ಪಾಲಾಗಿವೆ.
ಪಾಲಿಕೆಯಲ್ಲಿ ಬಹುಮತವನ್ನು ಹೊಂದಿರುವ ಬಿಜೆಪಿ ಅಭ್ಯರ್ಥಿ ಸುವರ್ಣ ಶಂಕರ್ ಮೇಯರ್ ಆದರೆ, ಉಪ ಮೇಯರ್ ಆಗಿ ಸುರೇಖಾ ಮುರುಳಿಧರ್ ಆಯ್ಕೆಯಾಗಿದ್ದಾರೆ. ಆದ್ರೆ ಬಿಜೆಪಿಯಲ್ಲೇ ಮೇಯರ್ ಸ್ಥಾನಕ್ಕೆ ಪೈಪೋಟಿ ಇದ್ದ ಕಾರಣ ಯಾರು ಮೇಯರ್ ಆಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಕೊನೆಗೂ ಸಚಿವ ಈಶ್ವರಪ್ಪ ಅವರ ಮಧ್ಯಸ್ಥಿಕೆಯಲ್ಲಿ ಬಿಜೆಪಿಯ ಹಿರಿಯ ಕಾರ್ಯಕರ್ತೆಗೆ ಮೇಯರ್ ಸ್ಥಾನ ಲಭಿಸಿದೆ.
ಪಾಲಿಕೆಯ ಸಭಾಂಗಣದಲ್ಲಿ ಪ್ರಾದೇಶಿಕ ಆಯುಕ್ತ ಎನ್.ವಿ. ಪ್ರಸಾದ್ ಸಮ್ಮುಖದಲ್ಲಿ ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಭಾಗವಹಿಸಿದ್ದ ಪಾಲಿಕೆ ಸದಸ್ಯರು ಹಾಗೂ ಶಾಸಕರ ಸಂಖ್ಯೆಯನ್ನು ಎಣಿಸುವ ಮೂಲಕ ಚುನಾವಣಾ ಪ್ರಕ್ರಿಯೆ ಆರಂಭಿಸಲಾಯಿತು.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ನ ಯಮುನಾ ರಂಗೇಗೌಡ ಹಾಗೂ ಬಿಜೆಪಿಯ ಸುವರ್ಣ ಶಂಕರ್ ಅವರು ತಲಾ ಎರಡು ನಾಮಪತ್ರ ಸಲ್ಲಿಸಿದ್ದರು. ನಂತ್ರ ಯಮುನ ರಂಗೇಗೌಡರ ಪರ ಇರುವವರು ಕೈ ಎತ್ತುವ ಮೂಲಕ ಮತ ಎಣಿಕೆ ಮಾಡಲಾಯಿತು. ಯಮುನ ಪರವಾಗಿ 12 ಮತಗಳು ಬಿದ್ದರೆ, ವಿರುದ್ಧವಾಗಿ 26 ಮತಗಳು ಚಲಾವಣೆಯಾದವು.
ಇದರಿಂದ 9 ನೇ ವಾರ್ಡ್ ನ ಸುವರ್ಣ ಶಂಕರ್ ಅವರನ್ನು ಎರಡನೇ ಅವಧಿಯ ಮೇಯರ್ ಎಂದು ಆಯುಕ್ತರು ಘೋಷಿಸಿದರು. ಅದೇ ರೀತಿ ಉಪ ಮೇಯರ್ ಸ್ಥಾನಕ್ಕೆ ಬಿಜೆಪಿಯ ಸುರೇಖಾ ಮುರುಳಿಧರ್ ಹಾಗೂ ಕಾಂಗ್ರೆಸ್ನಿಂದ ಮೆಹಕ್ ಷರಿಫ್ ನಾಮಪತ್ರ ಸಲ್ಲಿಸಿದ್ದರು. ಮೆಹಕ್ ಷರಿಫ್ ಅವರ ಪರವಾಗಿ 12 ಮತಗಳು ಹಾಗೂ ವಿರುದ್ಧ 26 ಮತಗಳು ಬಿದ್ದವು. ಈ ಮೂಲಕ ಬಿಜೆಪಿ ಸುರೇಖಾ ಮುರುಳಿಧರ್ ಉಪ ಮೇಯರ್ ಆಗಿ ಆಯ್ಕೆಯಾದರು.
ಮೇಯರ್ ಸ್ಥಾನಕ್ಕೆ ಬಿಜೆಪಿಯ ಸುವರ್ಣ ಶಂಕರ್ ಹಾಗೂ ಅನಿತಾ ರವಿಶಂಕರ್ ಅವರ ನಡುವೆ ಪೈಪೋಟಿ ಇತ್ತು. ಅನಿತಾ ರವಿಶಂಕರ್ ಅವರು ಮೇಯರ್ ಸ್ಥಾನದ ಆಕಾಂಕ್ಷಿಯಾಗಿದ್ದರು ಸಹ ಪಕ್ಷದ ಹಿರಿಯ ಮುಖಂಡರ ಒತ್ತಡಕ್ಕೆ ಮಣಿದು ಮೇಯರ್ ಸ್ಥಾನವನ್ನು ಬಿಟ್ಟುಕೊಟ್ಟರು.
ಬಿಜೆಪಿಯ ಒಳ ಜಗಳದಲ್ಲಿ ಲಾಭ ಪಡೆಯುವ ಯತ್ನದಲ್ಲಿದ್ದ ಕಾಂಗ್ರೆಸ್ ಚುನಾವಣೆಯ ಬಗ್ಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಈಗ ಯಮುನಾ ರಂಗೇಗೌಡ ಕೋರ್ಟ್ ಗೆ ಹೋಗುವುದಾಗಿಯೂ ತಿಳಿಸಿದ್ದಾರೆ.