ರಾಮನಗರ: ಜಿಲ್ಲೆಯ ಕನಕಪುರ ನಗರಸಭೆ ಮತ್ತು ಮಾಗಡಿ ಪುರಸಭೆಗೆ ನಡೆದ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಅಂತ್ಯಗೊಂಡಿದೆ.
ಕನಕಪುರ ನಗರಸಭೆಗೆ ಶೇ.69.72 ಮತದಾನ ನಡೆದಿದೆ. ಕನಕಪುರದ ಕುರುಪೇಟೆ ವಾರ್ಡ್ ನಂಬರ್ 6 ರಲ್ಲಿ ಪಕ್ಷೇತರ ಅಭ್ಯರ್ಥಿ ಪರವಾಗಿ ಮತಯಾಚನೆ ನಡಸುತ್ತಿದ್ದ ಗುಂಪಿನೊಂದಿಗೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಕೃಷ್ಣಾಮೂರ್ತಿ ಸೇರಿದಂತೆ ಇನ್ನಿತರರು ಗಲಾಟೆ ನಡೆಸಿದರು.ಈ ವೇಳೆ ಪೊಲೀಸರು ಮಧ್ಯ ಪ್ರವೇಶಿಸಿ ಕೃಷ್ಣಮೂರ್ತಿಯನ್ನು ವಶಕ್ಕೆ ಪಡೆದರು.ನಗರಸಭೆಯಲ್ಲಿನ ಮತಗಟ್ಟೆ ಮುಂಭಾಗದಲ್ಲಿ ಕೇಸರಿ ಬಟ್ಟೆ ತೊಟ್ಟು ನಿಂತಿದ್ದ ಅವರನ್ನು ಕಾಂಗ್ರೆಸ್ ಮುಖಂಡರು ಪ್ರಶ್ನಿಸಿದರು. ಈ ವೇಳೆ ಗಲಾಟೆ ನಿಯಂತ್ರಿಸಲು ಮುಂದಾದ ಪೊಲೀಸರೊಂದಿಗೆ ಕಾಂಗ್ರೆಸ್ ಮುಖಂಡರು ವಾಗ್ವಾದ ನಡೆಸಿದ್ರು.ರಾಜ್ಯ ಚುನಾವಣಾ ಆಯುಕ್ತ ಬಸವರಾಜು ವಿವಿಧ ಮತಗಟ್ಟೆಗಳ ಪರಿಶೀಲನೆ ನಡೆಸಿದರು.
ಮಾಗಡಿ ಪುರಸಭೆಯಲ್ಲಿ ಶೇ 81.42 ಮತದಾನ ನಡೆಯಿತು.ಇನ್ನು ಮತಗಟ್ಟೆಯಲ್ಲಿನ ಇವಿಎಂಗೆ ಪೂಜೆ ಸಲ್ಲಿಸಲು ಬಂದಿದ್ದ ವ್ಯಕ್ತಿಯೊಬ್ಬನನ್ನು ಮತಗಟ್ಟೆ ಅಧಿಕಾರಿಗಳು ತಡೆದು ವಾಪಸ್ ಕಳುಹಿಸಿದ ಘಟನೆ ನಡೆಯಿತುಮತದಾನ ಆರಂಭಕ್ಕೂ ಮುನ್ನವೇ, ಮಾಗಡಿಯ ಹೊಸಪೇಟೆ ಶಾಲೆಯಲ್ಲಿ ಕ್ಲಸ್ಟರ್ ಮತಗಟ್ಟೆಯಲ್ಲಿ ಈ ಘಟನೆ ನಡೆದಿದ್ದು ಇನ್ನುಳಿದಂತೆ ಬಹುತೇಕ ಶಾಂತಿಯುತವಾಗಿ ಜರುಗಿತು.