ರಾಯಚೂರು: ಬಂಗಾರದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿ ಆಭರಣ ಕದ್ದು ಪರಾರಿಯಾಗಿದ್ದ ಕಳ್ಳರನ್ನು ಬಂಧಿಸುವಲ್ಲಿ ಮುದಗಲ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಜಿಲ್ಲೆಯ ಮುದಗಲ್ ಠಾಣೆಯ ಕಳೆದ ಅ.19ರಂದು ಅಂಗಡಿ ಮಾಲೀಕ ಶ್ರವಣ್ ಜೈನ್ ವ್ಯಾಪಾರ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದರು. ಈ ಸಮಯದಲ್ಲಿ ಮೂವರು ಅಪರಿಚಿತ ವ್ಯಕ್ತಿಗಳು ಶ್ರವಣ್ ಕಣ್ಣಿಗೆ ಖಾರದಪುಡಿ ಎರಚಿ 300 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ಈ ಕುರಿತು ಮುದಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ದೂರಿನ ಆಧಾರದ ಮೇಲೆ ವಿಶೇಷ ತಂಡ ರಚಿಸಿ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮುದಗಲ್ ಪಟ್ಟಣದ ಹಳೇಪೇಟೆಯ ದಾದಾಪೀರ ಅಲಿಯಾಸ್ ದದ್ದು, ಗೋಕುಲ್ ಸಾಬ್ ಅಲಿಯಾಸ್ ಗೌಸ್ ನಂದಿಹಾಳ, ಜನತಾ ಕಾಲೋನಿಯ ಸಾಬೀರ್ ಬೇಗ್ ಬಂಧಿತರು.
ಆರೋಪಿಗಳಿಂದ ಅಂದಾಜು 12 ಲಕ್ಷ 50 ಸಾವಿರ ರೂ ಮೌಲ್ಯದ 256 ಗ್ರಾಂ ಚಿನ್ನಾಭರಣ ಹಾಗೂ ದರೋಡೆಗೆ ಬಳಸಿದ 50 ಸಾವಿರ ರೂ ಮೌಲ್ಯದ ಸ್ಕೂಟಿ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: ಕ್ರೆಡಿಟ್ ಕಾರ್ಡ್ ಮಿತಿ ಹೆಚ್ಚಿಸುವುದಾಗಿ ಕರೆ: ದೊಡ್ಡಬಳ್ಳಾಪುರದ ವ್ಯಕ್ತಿಗೆ 58 ಸಾವಿರ ರೂ ವಂಚನೆ