ರಾಯಚೂರು: ನಗರದ ಗದ್ವಾಲ್ ರಸ್ತೆಯಲ್ಲಿರುವ ಸಾವಿತ್ರಿ ರೈಸ್ ಮಿಲ್ನಲ್ಲಿ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದ್ದಾರೆ.
ಸಾವಿತ್ರ ರೈಸ್ ಮಿಲ್ ಕೆಲಸ ಮಾಡುವ ಬಿಹಾರ ಮೂಲದ ಕಾರ್ಮಿಕನೋರ್ವ ದೇವಿನಗರ ಬಡಾವಣೆ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಚುಡಾಯಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ಸಂಬಂಧ ಕಾರ್ಮಿಕ ಕೆಲಸ ಮಾಡುವ ರೈಸ್ ಮಿಲ್ನೊಳಗೆ ತೆರಳಿದ ವೇಳೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಲಘುಲಾಠಿ ಪ್ರಹಾರ ಮಾಡಿದ್ದಾರೆ.
ಘಟನೆಗೆ ಕಾರಣ: ಸಾವಿತ್ರಿ ರೈಸ್ ಮಿಲ್ನಲ್ಲಿ ಕೆಲಸ ಮಾಡುವ ಕಾರ್ಮಿಕನೋರ್ವ ಸ್ಥಳೀಯ ಬಾಲಕಿ ಬಹಿದೆರ್ಸೆಗೆ ತೆರಳಿದ ವೇಳೆ ಚುಡಾಯಿಸಿ, ಅಸಭ್ಯವಾಗಿ ವರ್ತಿಸಿದ್ದಾನೆ. ಈ ಬಗ್ಗೆ ಬಾಲಕಿ ಪೊಷಕರಿಗೆ ತಿಳಿಸಿದ್ದಾಳೆ. ಬಳಿಕ ಬಡಾವಣೆ ನಿವಾಸಿಗಳು ಈ ಬಗ್ಗೆ ವಿಚಾರಿಸಿ ಕಾರ್ಮಿಕನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಿನ್ನೆಈ ಘಟನೆ ನಡೆದಿದ್ದು, ಬಳಿಕ ಇಂದು ಈ ಬಗ್ಗೆ ಕಾರ್ಮಿಕ ಕೆಲಸ ಮಾಡುವ ಮಾಲೀಕರನ್ನು ವಿಚಾರಿಸಲು ಸ್ಥಳೀಯರು ತೆರಳಿದ್ದಾರೆ. ಈ ಸಂದರ್ಭ ಮಾತಿನ ಚಕಮಕಿ ನಡೆದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಈ ವೇಳೆ ಪೊಲೀಸರು ಲಘುಲಾಠಿ ಪ್ರಹಾರ ನಡೆಸಿದ್ದಾರೆ.
ಮಾಲೀಕ ಹೇಳುವುದೇನು?: ನಿನ್ನೆ ಈ ಘಟನೆ ನಡೆದಿದೆ. ಘಟನೆಯ ಬಳಿಕ ಸ್ಥಳೀಯರು ಕಾರ್ಮಿಕರ ವಾಸ ಮಾಡುವ ಮನೆಗೆ ನುಗ್ಗಿ ಹಣ, ದವಸ ಧಾನ್ಯಗಳನ್ನ ಕದ ಕದ್ಯೊಯ್ದಿದ್ದಾರೆ. ನಮ್ಮಲ್ಲಿ ಕೆಲಸ ಮಾಡುವ ಕಾರ್ಮಿಕ ತಪ್ಪು ಮಾಡಿದ್ದರೆ, ಪೊಲೀಸ್ ಠಾಣೆಗೆ ದೂರು ನೀಡಿ. ತಪ್ಪು ಇದ್ದರೆ ಶಿಕ್ಷೆ ನೀಡಲಿ. ಆದ್ರೆ ಈ ರೀತಿಯಾಗಿ ಗುಂಪಾಗಿ ರೈಸ್ ಮಿಲ್ನೊಳಗೆ ಬಂದು ಗಲಾಟೆ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ಬಗ್ಗೆ ನಾವು ರೈಸ್ ಮಿಲ್ ಅಸೋಶಿಯೇಶನ್ನಿಂದ ಸಭೆ ಕರೆದು ಚರ್ಚಿಸಿ, ದೂರು ನೀಡುವುದಾಗಿ ಸಾವಿತ್ರಿ ರೈಸ್ ಮೀಲ್ ಮಾಲೀಕ ಸಾವಿತ್ರ ಪುರುಷೋತ್ತಮ್ ತಿಳಿಸಿದ್ದಾರೆ.