ರಾಯಚೂರು: ಅಕ್ರಮ ಮರಳು ದಂಧೆಗೆ ಸಾಥ್ ನೀಡಿರುವ ಪೊಲೀಸರು ಹಣ ನೀಡಿಲ್ಲ ಎನ್ನುವ ಕಾರಣಕ್ಕೆ ಟ್ರ್ಯಾಕ್ಟರ್ ಚಾಲಕನ ಮೇಲೆ ಹಲ್ಲೆ ಮಾಡಿರುವ ಆರೋಪ ರಾಯಚೂರಿನಲ್ಲಿ ಕೇಳಿ ಬಂದಿದೆ.
ತಾಲೂಕಿನ ಯರಗೇರಾ ಠಾಣೆ ವ್ಯಾಪ್ತಿಯ ಪೊಲೀಸರಿಂದ ಹಣ ವಸೂಲಿ ದಂಧೆ ನಡೆದಿದ್ದು, ಹಣ ನೀಡದ ಭೀಮಾಶಂಕರ ಎಂಬುವವರ ಮೇಲೆ ಪೊಲೀಸ್ ಪೇದೆಗಳಾದ ಹನುಮಂತರಾಯ ಹಾಗೂ ಸಂತೋಷ ಹಲ್ಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಬಂದಿದೆ.
ಸದ್ಯ ಹಲ್ಲೆಗೊಳಗಾದ ಭೀಮಾಶಂಕರ್ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಲ್ಲಿಯ ಪೊಲೀಸರು ಅಕ್ರಮ ಮರಳು ದಂಧೆಕೋರರಿಂದ ಹಣ ವಸೂಲಿ ಮಾಡುತ್ತಿದ್ದು, ಲಂಚ ನೀಡುವಂತೆ ಕೇಳುವ ಪೊಲೀಸ್ ಮೊಬೈಲ್ ಪೋನ್ ಸಂಭಾಷಣೆ ಬಹಿರಂಗಗೊಂಡಿದೆ. ರಾಯಚೂರು ತಾಲೂಕಿನ ಬಾಯಿದೊಡ್ಡಿ ಗ್ರಾಮದ ಭೀಮಾಶಂಕರ ಎಂಬಾತನಿಗೆ ಲಂಚ ನೀಡುವಂತೆ ಪೊಲೀಸರು ಕಿರುಕುಳ ನೀಡಿದ್ದು, ಹಣ ಕೊಡದಿದ್ರೆ ಟ್ರ್ಯಾಕ್ಟರ್ ಜಪ್ತಿ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಆನಂತರ ಹಣ ನೀಡದ್ದಕ್ಕೆ ಪೊಲೀಸರು ಹಲ್ಲೆಗೆ ಮುಂದಾಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಜಿಲ್ಲೆಯಲ್ಲಿ ಎರಡು ನದಿಗಳು ಹರಿಯುತ್ತಿರುವುದರಿಂದ ಯಥೇಚ್ಛವಾಗಿ ಮರಳು ದೊರೆಯುತ್ತಿದ್ದು, ಸರಕಾರದ ಬೊಕ್ಕಸಕ್ಕೆ ನಷ್ಟವಾಗದಂತೆ ಮರಳುಗಾರಿಕೆ ಕಾನೂನು ಕ್ರಮ ಕೈಗೊಳ್ಳಬೇಕು. ಆದ್ರೆ, ಇಲ್ಲಿ ಪೊಲೀಸರೇ ಅಕ್ರಮ ಮರಳುಗಾರಿಕೆಗೆ ಸಾಥ್ ನೀಡುತ್ತಿದ್ದಾರೆ ಎನ್ನುವ ಸಂಶಯ ವ್ಯಕ್ತವಾಗಿದೆ.