ರಾಯಚೂರು: ಜನತಾ ದರ್ಶನದಲ್ಲಿ ಸಿಎಂ ಭೇಟಿಗೆ ಅವಕಾಶ ನೀಡಲಿಲ್ಲವೆಂದು ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ಗಳಲ್ಲಿ ಅಡುಗೆ ಹಾಗೂ ರಾತ್ರಿ ಕಾವಲುಗಾರರಾಗಿ ಕೆಲಸ ಮಾಡುತ್ತಿರುವ ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಮನವಿ ಮಾಡಲು ದೇವದುರ್ಗದಿಂದ ಬಂದಿದ್ದೇವೆ. ವಾಹನಗಳನ್ನು ನಗರದೊಳಗೆ ಬಿಡಲ್ಲ ಎಂದು ಡಿಸಿ ಆದೇಶ ಮಾಡಿದ್ದರಿಂದ ನಡೆದುಕೊಂಡೇ ಬಂದೆವು. ಆದರೆ ಇಲ್ಲಿ ಪೊಲೀಸರು ಒಳಗೆ ಬಿಡುತ್ತಿಲ್ಲ ಎಂದು ಆರೋಪಿಸಿದರು.
ಹೊರಗುತ್ತಿಗೆ ಆಧಾರದಲ್ಲಿ 15-20 ವರ್ಷಗಳಿಂದ ದುಡಿಯುತ್ತಿದ್ದೇವೆ. ನಮ್ಮನ್ನು ಕಾಯಂ ಮಾಡಬೇಕು. ತಿಂಗಳಿಗೆ ಸರಿಯಾಗಿ ಸಂಬಳ ಕೊಡಬೇಕು. ಮಕ್ಕಳನ್ನು ಸ್ಕೂಲಿಗೆ ಕಳಿಸಲು, ಮನೆಯಲ್ಲಿ ಊಟಕ್ಕೂ ತಾಪತ್ರಯವಿದೆ. ಇದೆಲ್ಲವನ್ನೂ ಸಿಎಂ ಮುಂದೆ ಹೇಳಿಕೊಳ್ಳಲು ಬಂದೆವು. 3 ಗಂಟೆ ನಿಂತಿದ್ರೂ ಒಳಗೆ ಬಿಡ್ತಿಲ್ಲ. ನಮ್ಮ ಸಂಕಷ್ಟ ಕೇಳಿ, ಪರಿಹಾರ ನೀಡದಿದ್ರೆ ಉಗ್ರ ಪ್ರತಿಭಟನೆ ಮಾಡ್ತೇವೆ. ವಿಧಾನಸೌಧಕ್ಕೆ ಮುತ್ತಿಗೆ ಹಾಕ್ತೀವಿ. ನಮ್ಮ ನೋವನ್ನು ಕೇಳದಿದ್ರೆ ಸಿಎಂ ಕುಮಾರಸ್ವಾಮಿ ಅವರೇ ವಿಷ ಕೊಟ್ಟು ಬಿಡಲಿ ಎಂದು ಹೊರಗುತ್ತಿಗೆ ನೌಕರಿ ಮಾಡುತ್ತಿರುವ ರೇಣುಕಾ ಎಂಬುವರು ಆಕ್ರೋಶದಿಂದ ನುಡಿದರು.
ಬಿಸಿಎಂ ಹಾಗೂ ಸಮಾಜ ಕಲ್ಯಾಣ ಇಲಾಖೆಯಡಿಯ ಹಾಸ್ಟೆಲ್ಗಳಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದವರನ್ನು ವಜಾ ಮಾಡಲು ಮುಂದಾಗಿದ್ದಾರೆ. ಒಂದು ವರ್ಷದಿಂದ ಸರಿಯಾಗಿ ಸಂಬಳ ಕೊಡುತ್ತಿಲ್ಲ. ಈ ಬಗ್ಗೆ ಸಿಎಂ ಸಿಂಧನೂರಿಗೆ ಬಂದಾಗಲೇ ಮನವಿ ಮಾಡಿದ್ದೆವು. ಆದರೂ ಸಮಸ್ಯೆ ಬಗೆಹರಿದಿಲ್ಲ. ಇನ್ನಾದರೂ ನಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡ್ತೇವೆ ಎಂದು ನೌಕರರು ಹೇಳಿದರು.
ಈ ವೇಳೆ, ವಿಕಲಚೇತನರು, ಬುದ್ಧಿ ಮಾಂದ್ಯರು ಸೇರಿ ವಿವಿಧ ವರ್ಗದವರು ಸಿಎಂ ಕುಮಾರಸ್ವಾಮಿಗಳಿಗೆ ಅಹವಾಲು ಸಲ್ಲಿಸಿದರು.
ಎಲ್ಲರೂ ಅಹವಾಲು ಸಲ್ಲಿಸುತ್ತಿರುವಾಗ ಕರ್ನಾಟಕ ರಾಜ್ಯ ಸರ್ಕಾರಿ ಎನ್ಪಿಎಸ್ ನೌಕರರ ಸಂಘದಿಂದ ಜನತಾ ದರ್ಶನದ ಬಳಿ ಪ್ರತಿಭಟನೆ ನಡೆಸಲಾಯಿತು. ಹೊಸ ಪಿಂಚಣಿ ವ್ಯವಸ್ಥೆ ರದ್ದುಪಡಿಸಿ ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿ ಮಾಡಬೇಕು. ಅವೈಜ್ಞಾನಿಕ ಸಿ ಅಂಡ್ ಅರ್ ನಿಯಮ ಸರಿಪಡಿಸಿ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರನ್ನು ಸಹ 6 ರಿಂದ 8 ತರಗತಿಯ ಶಿಕ್ಷಕರೆಂದು ಪರಿಗಣಿಸಬೇಕು. ಮೂರು ವರ್ಷಗಳಿಂದ ನನೆಗುದುಗೆ ಬಿದ್ದು, ಮತ್ತೆ ಆರಂಭಗೊಂಡಿರುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಹಲವಾರು ತೊಂದರೆಗಳಿವೆ. ಇವುಗಳನ್ನೆಲ್ಲ ಸರಿಪಡಿಸಬೇಕು ಎಂದು ಅಗ್ರಹಿಸಿದರು.