ಮೈಸೂರು : ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನದ ಹಿನ್ನೆಲೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಜನ ಸಾಧಕರಿಗೆ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಅರಮನೆ ವೇದಿಕೆಯಲ್ಲಿ ನಡೆದ ಸಮಾರಂಭದಲ್ಲಿ ಆದಿಚುಂಚನಗಿರಿ ಜಗದ್ಗುರು ಶ್ರೀನಿರ್ಮಲಾನಂದನಾಥ ಸ್ವಾಮೀಜಿಯವರು ಗಣ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಸ್ವಾಮೀಜಿಯವರು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಆಧುನಿಕತೆಯ ಬೆಳವಣಿಗೆಗೆ ನೀಡಿದ ಕೊಡುಗೆ ಅಪಾರ. ಅವರು ಎಲ್ಲಾ ಕ್ಷೇತ್ರದ ಬೆಳವಣಿಗೆಗೂ ಅದ್ಯತೆ ನೀಡಿದರು ಎಂದು ಶ್ರೀಗಳ ಕಾರ್ಯಗಳನ್ನು ಸ್ಮರಿಸಿದರು.
ಸ್ವಾಮಿ ವಿವೇಕಾನಂದರು ಟಾಟಾ ಅವರಿಗೆ ಆಧ್ಯಾತ್ಮದ ಜೊತೆಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಕೈಗಾರೀಕರಣ ಬೆಳೆಸಲು ಸಲಹೆ ನೀಡಿದರು. ವಿವೇಕಾನಂದರ ಮಾತುಗಳಿಂದ ಸ್ಫೂರ್ತಿಗೊಂಡ ಟಾಟಾ ಅವರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 450 ಎಕರೆ ಭೂಮಿಯನ್ನು ಉಚಿತವಾಗಿ ನೀಡಿದ ಫಲವಾಗಿ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ ಸ್ಥಾಪನೆಯಾಯ್ತು ಎಂದು ಹೇಳಿದರು.
![Awards ceremony in mysore](https://etvbharatimages.akamaized.net/etvbharat/prod-images/13348665_thumjpg.jpg)
ನಾಲ್ವಡಿಯವರು ಸ್ವದೇಶಿ ಮತ್ತು ಪಾಶ್ಚಾತ್ಯ ದೃಷ್ಟಿಕೋನ ಸಮ್ಮಿಲನ ಮಾಡಿಕೊಂಡು ಅದ್ಭುತವಾಗಿ ಮೈಸೂರನ್ನು ಕಟ್ಟಿದ್ದಾರೆ. ಹಳ್ಳಿ-ಹಳ್ಳಿಗಳಲ್ಲಿ ಶಾಲೆಗಳ ಸ್ಥಾಪನೆ, ಮೈಸೂರು ವಿಶ್ವವಿದ್ಯಾಲಯ, ಸಹಕಾರಿ ಬ್ಯಾಂಕ್ಗಳು, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಇನ್ನೂ ಅನೇಕ ಸಂಸ್ಥೆಗಳನ್ನು ಒಡೆಯರ್ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಯಾವ ವ್ಯಕ್ತಿ ಜಗತ್ತಿಗೆ ಸೇವೆ ಮಾಡಬೇಕೆಂಬ ದೃಷ್ಟಿಯಿಂದ ಜೀವಿಸುತ್ತಾರೋ ಅವರು ಸತ್ತ ಮೇಲೂ ಬದುಕುತ್ತಾರೆ. ಯಾವ ವ್ಯಕ್ತಿ ತನಗೋಸ್ಕರ ಮಾತ್ರ ಬದುಕುತ್ತಾನೋ ಅವನು ಬದುಕಿದ್ದು ಸತ್ತ ಹಾಗೆ. ಇದಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಸಾಕ್ಷಿ. ನಾಡನ್ನು ಕಟ್ಟಿ ಆಧುನಿಕ ಮೈಸೂರನ್ನಾಗಿ ಬೆಳೆಸಿದ ಪರಿ ನಮ್ಮೆಲ್ಲರಿಗೂ ಆದರ್ಶ ಪ್ರಾಯವಾಗಿದೆ ಎಂದರು.
ನಾಡಿನ ಹಿರಿಮೆ ಹೆಚ್ಚಿಸಲು ಬದುಕು ಮುಡಿಪಾಗಿಟ್ಟಂತಹ ವ್ಯಕ್ತಿಗಳನ್ನು ಗುರುತಿಸಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಅವರು ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ ಎಂದರು.
ಇದನ್ನೂ ಓದಿ: ಭೂ ಕಂಪನದಿಂದ ತಲ್ಲಣಗೊಂಡ ಗಡಿಕೇಶ್ವರ ಗ್ರಾಮಕ್ಕೆ ವಿಜ್ಞಾನಿಗಳ ತಂಡ ಭೇಟಿ