ಮೈಸೂರು : ಐಎಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧ ಮಾಡಬೇಕೆಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿಗೆ ಸಂಸದ ಪ್ರತಾಪ್ ಸಿಂಹ ಮನವಿ ಮಾಡಿದರು. ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿ ಸಿಲ್ವರ್ ಸ್ಪಿರಿಟ್ ಟೆಕ್ ಪಾರ್ಕ್ನಲ್ಲಿ ಸ್ಥಾಪಿಸಿರುವ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಮೈಸೂರು ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಸಂಸದರು ಭಾಗವಹಿಸಿ ಮಾತನಾಡಿದರು.
ಐಎಎಸ್, ಐಪಿಎಸ್ ಅಧಿಕಾರಿಗಳು ಏನೂ ಕೆಲಸ ಮಾಡದಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ಅಧಿಕಾರಿಗಳು ಮಾಡಿದ ಕೆಲಸಗಳನ್ನು ಜಿಲ್ಲೆಯಿಂದ ಒಂದು ಅಕೌಂಟ್ ತೆರೆದು ಅದರಲ್ಲೂ ಮಾಹಿತಿ ಹಾಕಲಿ, ಫ್ಯಾನ್ಸ್ ಫೇಜ್ಗಳಿಂದ ಹೊಗಳಿಕೆಗಳು ಸೃಷ್ಟಿಯಾಗಿದೆ. ಯಾರೋ ಒಬ್ಬ ಲಾಠಿ ಹಿಡಿದು ಓಡಾಡಿದ್ರೆ ಹಾಗೆ ಹೀಗೆ ಅಂತಾ ಬಿಂಬಿಸಲಾಗುತ್ತಿದೆ. ಐಎಎಸ್, ಐಪಿಎಸ್ ಅಧಿಕಾರಿಗಳು ಉತ್ತಮ ಕೆಲಸಗಳನ್ನು ಮಾಡಬೇಕು ಎಂದರು.
ನನಗೆ ಎಸ್ಎಂ ಕೃಷ್ಣರಂತಹ ಮುಖ್ಯಮಂತ್ರಿ ಇಷ್ಟ : ಎಸ್ ಎಂ ಕೃಷ್ಣ ಅವರು ರಾಜ್ಯದ ಸಿಎಂ ಆಗಿದ್ದಾಗ ಕೈಗಾರಿಕೆ ಬೆಳವಣಿಗೆಗೆ ಉತ್ತೇಜನ ನೀಡಿದ್ದರು. ಕೃಷ್ಣ ಅವರ ಮುಂದಾಲೋಚನೆ ಕೆಲಸಗಳ್ನು ಫಾಲೋ ಮಾಡಬೇಕು. ನಾನು ಬಿಜೆಪಿಯವನಾಗಿರಬಹುದು.
ಆದರೂ ನಾನು ಎಲ್ಲಾ ಮುಖ್ಯಮಂತ್ರಿಗಳಿಗಿಂತ ಕೃಷ್ಣ ಅವರನ್ನು ಬಹಳ ಇಷ್ಟಪಡ್ತೇನೆ. ಅವರ ಕಾರ್ಯವೈಖರಿ ನನಗೆ ವೈಯಕ್ತಿಕವಾಗಿ ಇಷ್ಟ ಎಂದರು. ನಾನು ಹಣ ಮಾಡಲು ಬಂದಿಲ್ಲ. ಮುಂದಿನ ವರ್ಷಕ್ಕೆ ಮೈಸೂರು-ಬೆಂಗಳೂರು ದಶಪಥ ರಸ್ತೆ, ಮೈಸೂರು ಮಡಿಕೇರಿ ರಸ್ತೆಗಳನ್ನು ನೀಡುತ್ತೇನೆ ಎಂದರು.
ಓದಿ: 10 ವರ್ಷಗಳ ಬಳಿಕ ಬಳ್ಳಾರಿಗೆ ಜನಾರ್ದನ ರೆಡ್ಡಿ ಎಂಟ್ರಿ: ವರಲಕ್ಷ್ಮಿ ಹಬ್ಬದಲ್ಲಿ ಭಾಗಿ