ಮೈಸೂರು: ಸಾ.ರಾ. ಕಲ್ಯಾಣ ಮಂಟಪಕ್ಕೆ ಭೂಮಿ ಹೇಗೆ ಬಂತು, ಯಾರು ಕೊಟ್ಟರು ಎಂದು ಸಾ.ರಾ.ಮಹೇಶ್ ಬಹಿರಂಗಪಡಿಸಬೇಕು ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಅವರು ಸಾ.ರಾ. ಕನ್ವೆನ್ಷನ್ ಹಾಲ್ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದಿದ್ದಾರೆ. ಆದರೆ, ಕನ್ವೆನ್ಷನ್ ಹಾಲ್ ಕೆರೆ ಜಾಗದ ಒತ್ತುವರಿ ಆಗಿದೆ ಎಂಬ ಅನುಮಾನವಿದೆ. ಆದ್ದರಿಂದ ಸಾ.ರಾ.ಮಹೇಶ್ ಅವರು ಕನ್ವೆನ್ಷನ್ ಹಾಲ್ಗೆ ಜಾಗ ಹೇಗೆ ಬಂತು? ಜಾಗದ ಮೂಲವೇನು? ಎಂಬುದನ್ನು ಬಹಿರಂಗಪಡಿಸಬೇಕು. ಆಗ ತನಿಖೆ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದರು.
ಸಾ.ರಾ.ಮಹೇಶ್ ಅವರು ಸರ್ವೆ ಮಾಡಿಸಿ ಎಂದು ಪ್ರತಿಭಟನೆ ಮಾಡಿದ್ದಾರೆ. ಅಧಿಕಾರಿಗಳು ಸರ್ವೆ ಮಾಡಲು ಅಕ್ಕಪಕ್ಕದ ಜನರಿಗೆ ನೋಟಿಸ್ ಕೊಟ್ಟಿದ್ದಾರಾ?, ಸಾರ್ವಜನಿಕರನ್ನು ಬಫೂನ್ಗಳಾಗಿ ಮಾಡುತ್ತಿದ್ದಾರೆ. ಪ್ರಾದೇಶಿಕ ಆಯುಕ್ತರ ತನಿಖೆ ಮೇಲೆ ನಂಬಿಕೆ ಇಲ್ಲ ಎಂದರು.
ಮೂಡಾದಲ್ಲಿ ನೂರಾರು ಕೋಟಿ ಹಗರಣ ಆಗಿದೆ. ಇದರಲ್ಲಿ ಮೂಡ ಅಧ್ಯಕ್ಷರ ಹೆಸರು ಕೇಳಿಬರುತ್ತಿದೆ. ಅವರು ಕೂಡ ರಾಜೀನಾಮೆ ಕೊಡಬೇಕು. ಅಲ್ಲದೇ ಮುಡಾ ಆಯುಕ್ತ ನಟರಾಜ್ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಇವರ ಮೇಲೆ ತನಿಖೆಗೆ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.