ಮೈಸೂರು: ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ(ಎನ್ಆರ್ಸಿ)ಯಿಂದ ಎಷ್ಟು ಅಪಾಯವಿದೆ ಎಂದು ಮನೆ ಮನೆಗೆ ತೆರಳಿ ನಾವು ಕರಪತ್ರ ಹಂಚ್ತೀವಿ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ತಿಳಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಎ,ಎನ್ಆರ್ಸಿ ಹಾಗೂ ಎನ್ಪಿಆರ್ ಬಗ್ಗೆ ಕೇಂದ್ರ ಸರ್ಕಾರ ಸರಿಯಾದ ಮಾಹಿತಿ ಕೊಡುತ್ತಿಲ್ಲ ಮತ್ತು ಇದರ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಹರಿಹಾಯ್ದರು. ಈ ವೇಳೆ ಪತ್ರಕರ್ತರ ಪ್ರಶ್ನೆಗೆ ಗರಂ ಆದ ಅವರು, ಆದಿವಾಸಿ, ಬಡವರು, ಪ್ರವಾಹದಿಂದ ತತ್ತರಿಸಿರುವ ಜನರು ಹೇಗೆ ದಾಖಲಾತಿ ಒದಗಿಸುತ್ತಾರೆ. ಅಸ್ಸೋಂನಲ್ಲಿ ಎನ್ಆರ್ಸಿಯಿಂದ 19 ಲಕ್ಷ ಜನರನ್ನ ಹೊರ ಹಾಕಿದ್ದಾರೆ. ಇದು ಮುಂದಿನ ದಿನಗಳಲ್ಲಿ ದೇಶಕ್ಕೆ ಅನ್ವಯವಾಗಲಿದೆ ಎಂದರು.
ಸೋಮಶೇಖರ್ ರೆಡ್ಡಿ ಪ್ರಚೋದಾನಾತ್ಮಕ ಭಾಷಣದ ಮೂಲಕ ಅಲ್ಪ ಸಂಖ್ಯಾತರನ್ನು ಕಡೆಗಣಿಸಿದ್ದಾರೆ. ಜೆಎನ್ಯು ವಿದ್ಯಾರ್ಥಿಗಳ ಮೇಲಿನ ಹಲ್ಲೆಯನ್ನು ಖಂಡಿಸುತ್ತೇನೆ ಎಂದು ಹೇಳಿದರು.
ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಎನ್ಆರ್ಸಿ ಹಾಗೂ ಸಿಎಎ ಬಗ್ಗೆ ಬಿಜೆಪಿಯವರು ಕರಪತ್ರ ಹಂಚುತ್ತಿದ್ದಾರೆ. ಅದರಲ್ಲಿ ಎಷ್ಟು ಸುಳ್ಳುಗಳಿವೆ ಎನ್ನುವುದರ ಬಗ್ಗೆ ನಾವು ಕರಪತ್ರ ಹಂಚ್ತೀವಿ, ಇದರ ಬಗ್ಗೆ ಬಿಜೆಪಿ ಮುಖಂಡರು ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.