ಮೈಸೂರು/ಶಿವಮೊಗ್ಗ : ಭಾರತವು ಪಾಕ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳು ಪಟಾಕಿ ಸಿಡಿಸಿ ಸಿಹಿ ವಿತರಿಸುವ ಮೂಲಕ ಸಂಭ್ರಮಾಚರಣೆ ಮಾಡಿದರು. ಭಾರತವು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಟಿ 20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಭರ್ಜರಿ ಜಯ ಸಾಧಿಸಿದ್ದು, ಭಾರತೀಯರ ದೀಪಾವಳಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.
ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ತಂಡಕ್ಕೆ ಜೈಕಾರ ಹಾಕಿ ಪಟಾಕಿ ಸಿಡಿಸಿ, ಬಳಿಕ ಪರಸ್ಪರ ಸಿಹಿ ಹಂಚುವ ಮೂಲಕ ವಿಜಯೋತ್ಸವವನ್ನು ಆಚರಿಸಲಾಯಿತು. ವಿರಾಟ್ ಕೊಹ್ಲಿ ಅವರ ಅಭೂತಪೂರ್ವ ಆಟದೊಂದಿಗೆ ಭಾರತವು ಗೆಲುವು ಸಾಧಿಸಿದ್ದಕ್ಕೆ ಕ್ರಿಕೆಟ್ ಪ್ರೇಮಿಗಳಿಗೆ ದೀಪಾವಳಿಗೆ ಗೆಲುವಿನ ಉಡುಗೊರೆಯನ್ನು ನೀಡಿದಂತಾಗಿದೆ.
ಶಿವಮೊಗ್ಗದಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ : ಶಿವಮೊಗ್ಗದಲ್ಲಿಯೂ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಲಾಯಿತು. ಭಾರತ ಮತ್ತು ಪಾಕ್ ನಡುವಿನ ಕ್ರಿಕೆಟ್ ಪಂದ್ಯವು ಪ್ರೇಕ್ಷಕರಲ್ಲಿ ಕ್ಷಣ ಕ್ಷಣಕ್ಕೂ ಕುತೂಹಲವನ್ನುಂಟು ಮಾಡಿತು. ಪಾಕ್ ವಿರುದ್ಧ ಭಾರತ ಜಯಭೇರಿ ಬಾರಿಸಿದ್ದಕ್ಕೆ ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ರವರು ತಮ್ಮ ಅಭಿಮಾನಿಗಳ ಜೊತೆಗೂಡಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಜೊತೆಗೆ ಮಲವಗೊಪ್ಪ ಬಡಾವಣೆಯಲ್ಲಿ ಜನತೆ ಹಾಗೂ ಮಕ್ಕಳು ಸೇರಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ: ದೀಪಾವಳಿ ಸಂಭ್ರಮದ ನಡುವೆ ಗಗನಕ್ಕೇರಿದ ಪಟಾಕಿ ದರ