ಮಂಡ್ಯ: ಕಳೆದ ಎರಡು ವರ್ಷಗಳಿಂದ ಅವರಿಬ್ಬರು ಒಬ್ಬರನ್ನೊಬ್ಬರು ಮನಸಾರೆ ಪ್ರೀತಿ ಮಾಡಿ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಇದೀಗ ಹುಡುಗಿಯ ಹೆತ್ತವರು ಪೊಲೀಸರ ಜೊತೆ ಸೇರಿ ಮದುವೆಯಾದ ಮೂರು ದಿನಕ್ಕೆ ನವ ಜೋಡಿಯನ್ನು ಬೇರೆ ಮಾಡಿದ್ದಾರೆ. ಅದಕ್ಕೆ ಕಾರಣವೇನು ಅಂತೀರಾ ಈ ಸ್ಟೋರಿ ನೋಡಿ.
ಮದುವೆಯಾದ ಯುವಕನ ಹೆಸರು ತೇಜಸ್. ಈತ ಮಂಡ್ಯದ ವಿವಿ ನಗರ ಬಡವಾಣೆಯ ನಿವಾಸಿ ಲಕ್ಷ್ಮೀನಾರಾಯಣರಾವ್ ಅವರ ಪುತ್ರ. ಕಳೆದೆರಡು ವರ್ಷಗಳಿಂದ ಕುಣಿಗಲ್ನ ವಾನಗೆರೆಯ ಗಂಗಭೈರಯ್ಯ ಅವರ ಪುತ್ರಿ ಚೈತನ್ಯ ಎಂಬ ಯುವತಿಯನ್ನು ಪ್ರೀತಿ ಮಾಡುತ್ತಿದ್ದ.
ಬೆಂಗಳೂರಿನ ಕಾಲೇಜುವೊಂದರಲ್ಲಿ ಓದುತ್ತಿದ್ದ ಚೈತನ್ಯಗೆ, ಅಲ್ಲೇ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ತೇಜಸ್ ನಡುವೆ ಸ್ನೇಹವಾಗಿ ನಂತರ ಪ್ರೀತಿಯಾಗಿದೆ. ಚೈತನ್ಯ ಪೋಷಕರಿಗೆ ಪ್ರೀತಿಯ ವಿಚಾರ ತಿಳಿದು ವಿಚಾರಿಸಿದಾಗ, ಇಬ್ಬರ ಜಾತಿ ಬೇರೆ ಬೇರೆ ಎಂದು ತಿಳಿದ ಕೂಡಲೇ ಚೈತನ್ಯ ಪೋಷಕರು ಬೇರೆ ಕಡೆ ಮದುವೆ ಮಾಡಲು ಮುಂದಾಗುತ್ತಾರೆ.
ಇನ್ನೂ ಈ ವಿಷಯ ತಿಳಿದ ಚೈತನ್ಯ ಫೆಬ್ರವರಿ 14 ರಂದು ಮನೆಯಿಂದ ಓಡಿ ಬಂದು ತೇಜಸ್ ಹಾಗೂ ಆತನ ಪೋಷಕರ ಬಳಿ ಮದುವೆಯಾಗುವುದಾಗಿ ಕೇಳಿಕೊಳ್ಳುತ್ತಾಳೆ. ಬಳಿಕ ಫೆಬ್ರವರಿ 15 ರಂದು ಮಂಡ್ಯದ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಮದುವೆಯಾಗಿ ಫೆಬ್ರವರಿ 16 ರಂದು ಮದುವೆಯ ನೋಂದಣಿಯನ್ನು ಸಹ ಮಾಡಿಸಿಕೊಂಡಿದ್ದಾರೆ.
ಮದುವೆಯಾಗಿ ಮೂರು ದಿನಗಳಾದ ನಂತರ ಹುಡುಗಿಯ ಪೋಷಕರು ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಗೆ ಬಂದು ಇಲ್ಲಿನ ಸಬ್ಇನ್ಪೆಕ್ಟರ್ ವೆಂಕಟೇಶ್ ಅವರಿಗೆ ವಿಷಯ ತಿಳಿಸುತ್ತಾರೆ. ನಂತರ ಹುಡುಗ - ಹುಡುಗಿಯನ್ನು ಕರೆಸಿ, ಹುಡುಗಿಯನ್ನು ಪೋಷಕರೊಂದಿಗೆ ಹೋಗಲು ವೆಂಕಟೇಶ್ ತಿಳಿಸಿದ್ದಾರೆ.
ಈ ವೇಳೆ ನಾವೇ ಮತ್ತೆ ಮದುವೆ ಮಾಡಿಕೊಡುತ್ತೇವೆ ಎಂದು ಹುಡುಗಿಯ ಪೋಷಕರು ಹೇಳಿದ್ದು, ಪೊಲೀಸರು ಹುಡುಗಿಯನ್ನು ಕರೆದುಕೊಂಡು ಹೋಗಿ ಎಂದು ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಹುಡುಗಿ ಬಾರದ ಕಾರಣ ತೇಜಸ್ ಫೋನ್ ಮಾಡಿದ್ದು, ಫೋನ್ ಸ್ವಿಚ್ಡ್ ಆಫ್ ಬಂದಿದೆ. ನಂತರ ಚೈತನ್ಯ ಬೇರೆ ನಂಬರ್ ನಿಂದ ಕರೆ ಮಾಡಿ ನನ್ನ ತಾಳಿಯನ್ನು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ಕಿತ್ತುಹಾಕಿದ್ದಾರೆ ಎಂಬ ವಿಷಯ ತಿಳಿಸಿದ್ದಾಳೆ.
ಇನ್ನು ಹುಡುಗಿಯ ಮನೆಯವರು ಸಹ ತೇಜಸ್ಗೆ ಫೋನ್ ಮೂಲಕ ಬೈಯ್ದು ಬೆದರಿಕೆ ಸಹ ಹಾಕಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಹೇಳಿದರೆ, ನಂಗೆ ಏನೂ ಗೊತ್ತಿಲ್ಲ ನಾನು ಯಾರನ್ನೂ ಕರೆಸಲ್ಲ ಎಂದು ಹುಡುಗನಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಹುಡುಗಿಯ ತಂದೆ ಹಾಗೂ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್ ಸ್ನೇಹಿತರು ಅದಕ್ಕಾಗಿ ನನ್ನ ಪ್ರೀತಿಯನ್ನು ಕೊಲೆ ಮಾಡುತ್ತಿದ್ದಾರೆ ಎಂದು ತೇಜಸ್ ಕಣ್ಣೀರಿಡುತ್ತಿದ್ದಾನೆ.
ಒಟ್ಟಿನಲ್ಲಿ ಈ ಪ್ರಕರಣದಲ್ಲಿ ಪೊಲೀಸರೇ ಪ್ರಮುಖ ಕಾರಣವಾಗಿದ್ದು, ನನಗೆ ಏನೇ ಆದರೂ ಪೊಲೀಸರೆ ಹೊಣೆ ಎಂದು ತೇಜಸ್ ಹೇಳುತ್ತಿದ್ದಾನೆ. ಪ್ರೀತಿಸಿ ಮದುವೆಯಾದ ಯುವ ಜೋಡಿಯನ್ನು ಜಾತಿಯ ಕಾರಣಕ್ಕೆ ಮೂರೇ ದಿನಕ್ಕೆ ಬೇರೆ ಮಾಡಿರುವುದು ಎಷ್ಟು ಸರಿ ಎಂಬುದು ಸಾರ್ವಜನಿಕರ ಪ್ರಶ್ನೆ ಕೂಡಾ ಆಗಿದೆ.