ಮಂಡ್ಯ: ಕೆ.ಆರ್ ಪೇಟೆ ಕಿಕ್ಕೇರಿ ಸಮೀಪದ ಅಣೆಚಾಕನಹಳ್ಳಿ ಬಳಿ ಅರಣ್ಯ ಇಲಾಖೆಯವರು ಇಟ್ಟಿದ್ದ ಬೋನಿಗೆ ತಡ ರಾತ್ರಿ ಚಿರತೆ ಸೆರೆಯಾಗಿದೆ.
ಇತ್ತೀಚೆಗೆ 8 ತಿಂಗಳ ಚಿರತೆ ಮರಿಯೊಂದು ಗ್ರಾಮದ ಹೊರವಲಯದಲ್ಲಿ ನಾಯಿಯನ್ನು ಎಳೆದುಕೊಂಡು ಹೋಗುವಾಗ ಹಳ್ಳಕ್ಕೆ ಬಿದ್ದು ಮೃತಪಟ್ಟಿತ್ತು. ನಂತರ ಅರಣ್ಯ ಇಲಾಖೆಯವರು ತಾಯಿ ಚಿರತೆ ಸೆರೆಗೆ ಬೋನು ಇಟ್ಟಿದ್ದರು. ನಿನ್ನೆ ತಡರಾತ್ರಿ ಚಿರತೆ ಸೆರೆಯಾಗಿದೆ.
ವಿಷಯ ತಿಳಿದ ಗ್ರಾಮಸ್ಥರು ಚಿರತೆ ವಿಡಿಯೋ ಮಾಡಲು ಮುಂದಾಗಿ ಗದ್ದಲ ಎಬ್ಬಿಸಿದ್ದರು. ಅರಣ್ಯ ಅಧಿಕಾರಿಗಳು ತಿಳಿ ಹೇಳಿ ಬೋನನ್ನು ತಾಲೂಕು ಅರಣ್ಯ ಇಲಾಖೆ ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ. ಮೇಲಧಿಕಾರಿಗಳಿಗೆ ಚಿರತೆ ಆರೋಗ್ಯ ಸ್ಥಿತಿಯನ್ನು ತಿಳಿಸಿ ಅರಣ್ಯಕ್ಕೆ ಬಿಡುವ ವ್ಯವಸ್ಥೆ ಮಾಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಗಂಗಾಧರ್ ತಿಳಿಸಿದರು.