ಮಂಡ್ಯ : ಗಣಿ ಇಲಾಖೆ ನೀಡಿದ ಜಾಗ ಬಿಟ್ಟು ಅಕ್ರಮ ಗಣಿಗಾರಿಕೆ ಮಾಡಿರುವುದು ಕಂಡು ಬಂದಿದೆ. ಈ ರೀತಿ ಅಕ್ರಮ ಗಣಿಗಾರಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಸಿಸಿ ಪಾಟೀಲ್ ಗುಡುಗಿದರು.
ಜಿಲ್ಲೆಯ ಹಲವು ಗಣಿ ಪ್ರದೇಶ ಹಾಗೂ ಕ್ರಷರ್ಗಳಿಗೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರಿಗಳೊಂದಿಗೆ ಸಭೆ ಮಾಡಿ ಬೇಬಿ ಬೆಟ್ಟಕ್ಕೆ ಭೇಟಿ ನೀಡುತ್ತೇನೆ. ಇಲಾಖೆ ನೀಡಿದ ಜಾಗ ಬಿಟ್ಟು ಅಕ್ರಮ ಗಣಿಗಾರಿಕೆ ಮಾಡಿರುವುದು ಕಂಡು ಬಂದಿದೆ. ಪರವಾನಿಗೆ ಕೊಟ್ಟ ಜಾಗದಲ್ಲಿ ಗಣಿಗಾರಿಕೆ ನಿಲ್ಲಿಸಿ ಪಕ್ಕದಲ್ಲಿ ಗಣಿಗಾರಿಕೆ ಮಾಡುತ್ತಿದ್ದಾರೆ. ಇಂತಹವರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.
ಇನ್ನು, ಪಕ್ಕದ ಗಣಿಗಾರಿಕೆಯನ್ನು ಸಹ ನಿಲ್ಲಿಸಿ ದಂಡ ಕಟ್ಟುವಂತೆ ಸೂಚಿಸಲಾಗಿದೆ. ಈಗಾಗಲೇ ಹಲವು ನೋಟಿಸ್ ನೀಡಲಾಗಿದೆ. ಸರಿಯಾದ ರೀತಿ ದಂಡ ಪಾವತಿಸದಿದ್ದರೆ ವಿದ್ಯುತ್ ನಿಲ್ಲಿಸಲಾಗುತ್ತೆ. 2012ರಿಂದ ಹಂಗ್ರಹಳ್ಳಿ ಮತ್ತು ಮುಡಲದೊರೆ ಬಳಿಯ ಅರಣ್ಯ ಪ್ರದೇಶಕ್ಕೆ ಸೇರಿದ 134 ಎಕರೆ ಜಾಗ ಅಲಾಟ್ ಆಗಿದೆ ಎಂದರು.
ಸಭೆಯಲ್ಲಿ ಕಾನೂನಿಗೆ ಒಳಪಡದ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟಲು ಸೂಚನೆ ನೀಡಿದ್ದು, ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.